ADVERTISEMENT

ದೇವನಹಳ್ಳಿ | ರೇಷ್ಮೆಗೆ ಮೊಂಥಾ ಚಂಡಮಾರುತ ಹೊಡೆತ: ರೈತರಿಗೆ ಮತ್ತೆ ಸಂಕಷ್ಟ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 29 ಅಕ್ಟೋಬರ್ 2025, 2:09 IST
Last Updated 29 ಅಕ್ಟೋಬರ್ 2025, 2:09 IST
ವಿಜಯಪುರ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ
ವಿಜಯಪುರ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ   

ವಿಜಯಪುರ (ದೇವನಹಳ್ಳಿ): ಮೊಂಥಾ ಚಂಡಮಾರುತ ಹೊಡೆತ ರೇಷ್ಮೆ ಬೆಳೆಗಾರರಿಗೆ ತಟ್ಟಿದ್ದು, ಜಡಿ ಮಳೆ ಹಾಗೂ ವಾತಾವರಣದಲ್ಲಿ ಹೆಚ್ಚು ಥಂಡಿ ಕಂಡು ಬಂದಿರುವುದರಿಂದ ರೇಷ್ಮೆ ಹುಳುವಿನಲ್ಲಿ ರೋಗ ಬಾಧೆ ಆವರಿಸುತ್ತಿರುವುದು ಬೆಳೆಗಾರರಲ್ಲಿ ಆತಂಕ ಶುರುವಾಗಿದೆ.

ಈಗಿರುವ ವಾತಾವರಣದಲ್ಲಿ ರೇಷ್ಮೆ ಹುಳುವಿನಲ್ಲಿ ಸಪ್ಪೆ, ಹಾಲು ತೊಂಡೆ ರೋಗ, ಹಣ್ಣಾಗಿರುವ ಹುಳು ಗೂಡು ಕಟ್ಟದೆ ನಿಶ್ಶಕ್ತಿ ಕಳೆದುಕೊಳ್ಳುವುದು, ಒಂದೇ ಸಾರಿ ಜ್ವರಕ್ಕೆ ಬಾರದಂತಹ ರೋಗ ಬಾಧೆ, ನೂಲು ಬಿಚ್ಚಣಿಕೆ ಸಮಸ್ಯೆ ಸಹಜವಾಗಿ ಕಾಣಿಸಿಕೊಳ್ಳಲಿದೆ. ಇದನ್ನು ನಿಯಂತ್ರಿಸಲು ರೇಷ್ಮೆ ಬೆಳೆಗಾರರು ಹರಸಾಹಸ ಪಡುವಂತಾಗಿದೆ.

ಕೆಲ ದಿನಗಳ ಹಿಂದೆ ವಿಜಯಪುರ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಒಂದು ಕೆ.ಜಿ ರೇಷ್ಮೆ ಗೂಡಿನ ದರ (ಸ್ಥಳೀಯ) ಗರಿಷ್ಠ ₹700 ರಿಂದ ₹750 ವರೆಗೆ ಮಾರಾಟವಾಗುತ್ತಿತ್ತು. ಆದರೆ ಮಂಗಳವಾರ ದಿಢೀರನೇ ದರದಲ್ಲಿ ಏರುಪೇರು ಕಂಡು ಬಂದಿದೆ.

ADVERTISEMENT

ಮಂಗಳವಾರ ಒಂದು ಕೆ.ಜಿ ರೇಷ್ಮೆ ಗೂಡಿನ ದರ ಗರಿಷ್ಠ ₹646 ವರೆಗೆ ಮಾರಾಟವಾಗಿದ್ದು, ಒಂದೇ ದಿನದಲ್ಲಿ ಗೂಡಿನ ದರದಲ್ಲಿ ₹80 ರಿಂದ ₹100 ವರೆಗೆ ಕುಸಿತ ಕಂಡು ಬಂದಿರುವುದರಿಂದ ರೇಷ್ಮೆ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.

ಮೊಂಥಾ ಚಂಡಮಾರುತದಿಂದ ಒಂದೆಡೆ ರೇಷ್ಮೆ ಗೂಡಿನ ದರ ಕುಸಿತ, ಮತ್ತೊಂದೆಡೆ ರೇಷ್ಮೆ ಹುಳುವಿನಲ್ಲಿ ರೋಗ ಬಾಧೆ ಕಾಣಿಸಿಕೊಳ್ಳುತ್ತಿರುವುದರಿಂದ ಹೆಚ್ಚು ನಷ್ಟಕ್ಕೆ ಸಿಲುಕಲಿದ್ದೇವೆ ಎಂಬ ಆತಂಕ ರೇಷ್ಮೆ ಬೆಳೆಗಾರರಲ್ಲಿ ಮನೆ ಮಾಡಿದೆ.

ಮೊಂಥಾ ಚಂಡಮಾರುತದಿಂದ ಒಂದೆಡೆ ರೇಷ್ಮೆಗೂಡಿನ ಬೆಲೆ ಕುಸಿತ ಕಂಡು ಬರುತ್ತಿದೆ. ಮತ್ತೊಂದೆಡೆ ಹುಳುಗಳು ರೋಗಕ್ಕೆ ತುತ್ತಾಗಿ ಬೆಳೆಗಾರರು ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ನಷ್ಟ ಪರಿಹಾರ ನೀಡಬೇಕು
ರವಿಕುಮಾರ್, ರೇಷ್ಮೆ ಬೆಳೆಗಾರ
ರೇಷ್ಮೆ ಹುಳ
ರೇಷ್ಮೆ ಇಲಾಖೆಯಿಂದ ಸಲಹೆ
ಮೊಂಥಾ ಚಂಡಮಾರುತ ಇರುವುದರಿಂದ ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೇಷ್ಮೆ ಇಲಾಖೆ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಬೆಳೆಗಾರರಿಗೆ ಸಲಹೆ ನೀಡಿದೆ. ಈಗಿನ ವಾತಾವರಣದಲ್ಲಿ ಸಹಜವಾಗಿ ರೇಷ್ಮೆ ಹುಳುವಿನಲ್ಲಿ ಸುಣ್ಣಕಟ್ಟು ಹಾಲು ತೊಂಡೆ ಇತರೆ ರೋಗಬಾಧೆ ಕಾಣಿಸಿಕೊಳ್ಳಲಿದೆ. ರೇಷ್ಮೆ ಹುಳುವಿಗೆ ಬೆಳಿಗ್ಗೆ ಹಿಪ್ಪುನೇರಳೆ ಸೊಪ್ಪು ಹಾಕುವ ಮುನ್ನ ಸುಣ್ಣ ಕ್ಯಾಪ್ಟನ್ ವಿಜೇತಾ ಸಿಂಪಡಿಸಬೇಕು. ರೇಷ್ಮೆ ಹುಳು ಮನೆಯಲ್ಲಿ ಗಾಳಿ ಬರುವಂತೆ ಕಿಟಕಿ ಬಾಗಿಲು ತೆರೆಯಬೇಕು. ಹೀಟರ್ ಕೆಂಡ ಇಟ್ಟು ಉಷ್ಣಾಂಶ ಹೆಚ್ಚಿಸಬೇಕು. ಹಣ್ಣಾಗಿರುವ ಹುಳ ಹಾಕಿರುವ ಚಂದ್ರಿಕೆ ಶೆಡ್‍ಗಳಲ್ಲಿ ಉಷ್ಣಾಂಶ ಹೆಚ್ಚಿಸಿಕೊಳ್ಳಬೇಕು. ತೇವಾಂಶದ ಸೊಪ್ಪು ಹಾಕಬಾರದು ಎಂದು ಬೆಂಗಳೂರು ಗ್ರಾಮಾಂತರ ರೇಷ್ಮೆ ಇಲಾಖೆ (ಜಿ.ಪಂ) ಉಪನಿರ್ದೇಶಕ ಸಿ.ಎಂ.ಲಕ್ಷ್ಮಣ್ ಸಲಹೆ ನೀಡಿದ್ದಾರೆ.
ಹಿಪ್ಪು ನೇರಳೆ ಸೊಪ್ಪಿನ ತೋಟ
ವರ್ಷದಲ್ಲಿ 131 ಹೆಕ್ಟೇರ್ ವಿಸ್ತರಣೆ
ಕೆಲ ವರ್ಷದಿಂದ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿಗೆ ಉತ್ತಮ ಬೆಲೆ ಬಂದಿದೆ. ಹೀಗಾಗಿ ಜಿಲ್ಲೆಯ ರೈತರು ರೇಷ್ಮೆ ಸಾಕಾಣಿಕೆಯಲ್ಲಿ ಒಲವು ತೋರಿದ್ದಾರೆ. ಕಳೆದ ವರ್ಷ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5070 ಹೆಕ್ಟೇರ್ ಪ್ರದೇಶ ಹಿಪ್ಪುನೇರಳೆ ಸೊಪ್ಪಿನ ತೋಟದ ಪ್ರದೇಶ ಇದ್ದರೆ ಪ್ರಸ್ತುತ ವರ್ಷ 131 ಹೆಕ್ಟೇರ್ ವಿಸ್ತರಣೆಗೊಂಡು 5201 ಹೆಕ್ಟೇರ್ ಪ್ರದೇಶ ಹೊಂದಿದೆ.
ರೇಷ್ಮೆ ಗೂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.