
ಚೊಳಪ್ಪನಹಳ್ಳಿ (ಹೊಸಕೋಟೆ): ‘ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ವ್ಯಕ್ತಿ ಘನತೆಯಿಂದ ಬದುಕುವ ಸ್ಥಿತಿ ನಿರ್ಮಾಣವಾಗಬೇಕಿದೆ. ಕಾಲ ಬದಲಾದಂತೆ ಜೀತ ಪದ್ಧತಿ ಹೊಸ ಸ್ವರೂಪವು ಬದಲಾಗುತ್ತ ಒಂದಲ್ಲ ಒಂದು ರೂಪದಲ್ಲಿ ತುಳಿತಕ್ಕೆ ಒಳಗಾಗುತ್ತಿದ್ದಾನೆ’ ಎಂದು ತಾಲ್ಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ಜಿ ಹೇಳಿದರು.
ತಾಲ್ಲೂಕಿನ ನಂದಗುಡಿ ಹೋಬಳಿಯ ಚೊಳಪ್ಪನಹಳ್ಳಿ ಗ್ರಾಮದ ಆಕ್ಸಸ್ಸ್ ವೇರ್ ಹೌಸಿಂಗ್ ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ತಾಲ್ಲೂಕಿನ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀತ ಪದ್ಧತಿ ಸಮಾಜದಲ್ಲಿನ ಅನಿಷ್ಟ ಪದ್ಧತಿಯಾಗಿದ್ದು. ಒಂದು ಕಾಲಕ್ಕೆ ಜೀತಗಾರಿಕೆ ಇಲ್ಲದ ಹಳ್ಳಿಗಳನ್ನು ನೋಡಲು ಸಾಧ್ಯವೇ ಇರಲಿಲ್ಲ ಅನ್ನುವಷ್ಟರ ಮಟ್ಟಿಗಿತ್ತು. ಕಾಲ ಬದಲಾದಂತೆ ಕಾಯ್ದೆಗಳು ಜಾರಿಗೊಂಡ ನಂತರ ಜೀತ ಪದ್ಧತಿ ಕಣ್ಮರೆಯಾಗುತ್ತಿದೆ ಎಂದು ಭಾವಿಸಲಾಗಿತ್ತು. ಆದರೆ ಇಂದು ಹೊಸ ರೂಪದಲ್ಲಿ ತಲೆಯೆತ್ತುತ್ತಿದೆ. ವಿಶೇಷವಾಗಿ ಹೊರ ರಾಜ್ಯಗಳಿಂದ ಬಂದ ಕಾರ್ಮಿಕರು ಮತ್ತು ಅವರ ಕುಟುಂಬವನ್ನು ಎಸ್ಟೇಟ್, ತೋಟ, ವೇರ್ಹೌಸ್, ಕಂಪನಿ, ಇಟ್ಟಿಗೆ ಕಾರ್ಖಾನೆಗಳಲ್ಲಿ ಜೀತಕ್ಕೆ ನಡೆಸಿಕೊಳ್ಳುವ ಸಂಸ್ಕೃತಿ ತಲೆ ಎತ್ತುತ್ತಿದೆ ಎಂದರು.
ಸುತ್ತಮುತ್ತ ಎಲ್ಲೆ ಈ ಪದ್ಧತಿ ಆಚರಣೆಯಲ್ಲಿದ್ದರೆ ಕೂಡಲೇ ಜಿಲ್ಲಾಧಿಕಾರಿ, ಕಾನೂನು ಪ್ರಾಧಿಕಾರದ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರೆ ಉಳಿದ ಕಾನೂನು ಕ್ರಮ ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯಾಧ್ಯಕ್ಷ ಹರಿಂದ್ರ ಮತಾನಾಡಿ, ದೇಶದಲ್ಲಿ ಇನ್ನು ಜೀತ ಪದ್ಧತಿಗೆ ಮುಕ್ತಿ ಸಿಕ್ಕಿಲ್ಲ. ತಿನ್ನಲು ಅನ್ನ ಇಲ್ಲದ ಅದೆಷ್ಟೋ ಕುಟುಂಬಗಳು ಇಂದಿಗೂ ಶ್ರೀಮಂತರ ತೋಟಗಳಲ್ಲಿ, ಕಲ್ಲು ಕ್ವಾರಿಗಳಲ್ಲಿ, ಎಸ್ಟೇಟ್, ಮನೆಗಳಲ್ಲಿ ಕೆಲಸ ಮಾಡುತ್ತಾ ತಮ್ಮ ಅಂತ್ಯ ಕಾಣುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ಕೆಲಸ ಕೊಡಿಸುವುದಾಗಿ ತಿಳಿಸಿ ಕಂಪನಿ, ವೇರ್ ಹೌಸ್, ಎಸ್ಟೇಟ್ಗಳಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸ್ಥಳೀಯ ಭಾಷೆ ಬರದಿರುವುದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದರು.
ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಂ ರವಿಕುಮಾರ್, ಆಕ್ಸಸ್ಸ್ ವೇರ್ ಹೌಸಿಂಗ್ ವ್ಯವಸ್ಥಾಪಕ ಗೋವಿಂದ ರಾಜ್, ಕಾರ್ಮಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.