ADVERTISEMENT

ದೊಡ್ಡಬಳ್ಳಾಪುರ: ಮಾಸ್ಕ್‌ ಧರಿಸದವರಿಗೆ ದಂಡ, ಪೊಲೀಸರ ಕಟ್ಟುನಿಟ್ಟಿನ ಕ್ರಮ

ಅನವಶ್ಯಕ ಗುಂಪುಗೂಡುವವರಿಗೆ ಪಾಠ;

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 4:45 IST
Last Updated 23 ಏಪ್ರಿಲ್ 2021, 4:45 IST
ಎಪಿಎಂಸಿ ಮಾರುಕಟ್ಟೆಯಲ್ಲಿ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಿದ ನಗರ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಕೆ.ವೆಂಕಟೇಶ್‌
ಎಪಿಎಂಸಿ ಮಾರುಕಟ್ಟೆಯಲ್ಲಿ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಿದ ನಗರ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಕೆ.ವೆಂಕಟೇಶ್‌   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಏರಗತಿಯಲ್ಲೇ ಸಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ನಿಯಂತ್ರಣವನ್ನು ಮಾಡುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ಜನರು ಗುಂಪು ಗೂಡುವುದು, ಮಾಸ್ಕ್‌ ಧರಿಸದೇ ಇರುವವರಿಗೆ ದಂಡ ವಿಧಿಸಲು ಗುರುವಾರ ಬೆಳಿಗ್ಗೆಯಿಂದ ಪೊಲೀಸರು ರಸ್ತೆಗೆ ಇಳಿದಿದ್ದಾರೆ.

ನಗರದ ಎಪಿಎಂಸಿ ಮಾರುಕಟ್ಟೆ ಪ್ರದೇಶ, ವಾಣಿಜ್ಯ ವಹಿವಾಟು ನಡೆಯುವ ಪ್ರದೇಶಗಳಿಗೆ ಭೇಟಿ ನೀಡಿದ್ದ ನಗರ ಪೊಲೀಸ್‌ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಕೆ.ವೆಂಕಟೇಶ್, ಸರ್ಕಾರ ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಮಾರ್ಗದರ್ಶಿ ನಿಯಮಗಳನ್ನು ಪಾಲಿಸದವರಿಗೆ ದಂಡ ವಿಧಿಸಿ,ಉಚಿತ ಮಾಸ್ಕ್‌ಗಳನ್ನು ವಿತರಣೆ ಮಾಡಿದರು.

ರಾತ್ರಿ ಕರ್ಫ್ಯೂ: ತಾಲ್ಲೂಕಿನಲ್ಲಿ ರಾತ್ರಿ ಕರ್ಫ್ಯೂ ಕುರಿತು ಮಾಹಿತಿ ನೀಡಿದ ಸರ್ಕಲ್ ಇನ್‌ಸ್ಪೆಕ್ಟರ್‌ ಎಂ.ಬಿ.ನವೀನ್‌ಕುಮಾರ್ ಮಾಹಿತಿ ನೀಡಿ,ಕೋವಿಡ್-19 ನಿಯಂತ್ರಣಕ್ಕೆ ಘೋಷಿಸಲಾಗಿರುವ ರಾತ್ರಿ ಕರ್ಫ್ಯೂಗೆ ಜನತೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಅಗತ್ಯ ವಸ್ತುಗಳ ಓಡಾಟಕ್ಕೆ ಬಿಟ್ಟರೆ ಅನಗತ್ಯವಾಗಿ ರಸ್ತೆಗಿಳಿಯುವವರ ಸಂಖ್ಯೆ ಕಡಿಮೆಯಾಗಿದೆ. ವಾರಾಂತ್ಯದ ಕರ್ಫ್ಯೂ ಮತ್ತಷ್ಟು ಕಠಿಣವಾಗಿರಲಿದೆ. ಸಾರ್ವಜನಿಕರು ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸಹಕರಿಸುವಂತೆ ‌ಮನವಿ‌ ಮಾಡಿದ್ದಾರೆ.

ADVERTISEMENT

ಹೋಟೆಲ್‌ಗಳಲ್ಲಿ ಅರೆಬರೆ ವ್ಯಾಪಾರ: ನಗರದ ದೊಡ್ಡ ಹೋಟೆಲ್‌ಗಳಿಂದ ಮೊದಲುಗೊಂಡು ಸಣ್ಣಪುಟ್ಟ ಹೋಟೆಲ್‌ಗಳವರೆಗೂ ಎಲ್ಲರು ಪಾರ್ಸಲ್‌ಗಳಿಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಹೋಟೆಲ್‌ಗಳಲ್ಲಿ ವ್ಯಾಪಾರ ಕುಸಿತಕಂಡಿದೆ.

ಹೋಟೆಲ್‌ಗಳಲ್ಲಿ ಟೇಬಲ್‌ಗಳನ್ನು ತೆಗೆದಿರುವುದರಿಂದ ಕುಳಿತು ಊಟ,ತಿಂಡಿ, ತಿನ್ನಲು, ಟೀ,ಕಾಫಿ ಕುಡಿಯಲು ಅವಕಾಶ ಇಲ್ಲದಾಗಿದೆ. ಹೀಗಾಗಿ ಅರೆಬರೆ ವ್ಯಾಪಾರವಾಗಿದೆ. ನೇಕಾರಿಕೆಯೇ ನಗರದಲ್ಲಿ ಹೆಚ್ಚಾಗಿರುವುದರಿಂದ ಬೆಳಗಿನ ಸಮಯದಲ್ಲಿ ಹೋಟೆಲ್‌ಗಳಲ್ಲಿ ವ್ಯಾಪಾರ ಹೆಚ್ಚು. ಆದರೆ ಗ್ರಾಹಕರು ಹೋಟೆಲ್‌ಗಳಲ್ಲಿ ಕುಳಿತು ತಿಂಡಿ ತಿನ್ನಲು ಅವಕಾಶ ಇಲ್ಲದೇ ಇರುವುದು ಹೋಟೆಲ್‌ ಮಾಲೀಕರಿಗು ಹಾಗೂ ಗ್ರಾಹಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮಾರುಕಟ್ಟೆ ಬಂದ್‌: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ವಾರಾಂತ್ಯ ಕರ್ಫ್ಯೂ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲೂ ಸಹ ಯಾವುದೇ ಹಣ್ಣು
ತರಕಾರಿಗಳ ವಹಿವಾಟುಗಳು ಇಲ್ಲದೆ ಸಂಪೂರ್ಣ ಬಂದ್‌ ಆಗಿರಲಿದೆ. ಹೀಗಾಗಿ ರೈತರು ಮಾರುಕಟ್ಟೆಗೆ ಯಾವುದೇ ಹಣ್ಣು ಮತ್ತು ತರಕಾರಿಗಳನ್ನು ತರದೆ ಸಹಕರಿಸಬೇಕು ಎಂದು ಎಪಿಎಂಸಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.