ADVERTISEMENT

ಮೋದಿ ಮರು ಆಯ್ಕೆಗೆ ಸುದರ್ಶನ ಹೋಮ

ನಮೋ ಸೇನೆಯಿಂದ ಶ್ರೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ಹೋಮ

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 14:37 IST
Last Updated 8 ಜುಲೈ 2018, 14:37 IST
ನಮೋ ಸೇನೆ ವತಿಯಿಂದ ಸುದರ್ಶನ ಹೋಮ ನಡೆಯಿತು
ನಮೋ ಸೇನೆ ವತಿಯಿಂದ ಸುದರ್ಶನ ಹೋಮ ನಡೆಯಿತು   

ದೊಡ್ಡಬಳ್ಳಾಪುರ: 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ಪ್ರಾರ್ಥಿಸಿ ನಮೋ ಸೇನೆ ವತಿಯಿಂದ ಭಾನುವಾರ ನಗರದ ತೇರಿನಬೀದಿಯಲ್ಲಿನ ಶ್ರೀವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಸುದರ್ಶನ ಹೋಮ ನಡೆಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಶ್ರೀವೆಂಕಟರಮಣಸ್ವಾಮಿ ವಿಶೇಷ ಅಲಂಕಾರ, ಪೂಜೆ, ಅರ್ಚನೆ ನಡೆಸಲಾಯಿತು. ನಂತರ ನೂರಾರು ಕಾರ್ಯಕರ್ತರ ಸಮುಖದಲ್ಲಿ ಪುರೋಹಿತ ಶ್ರೀನಿವಾಸ ಗೊಪಾಲ ಭಟ್‌ ನೇತೃತ್ವದಲ್ಲಿ ಬೆಳಿಗ್ಗೆ 9ರಿಂದ 2 ಗಂಟೆಯವರೆಗೆ ಸುದರ್ಶನ ಹೋಮ ನಡೆಯಿತು.

ಬಿಜೆಪಿ ಮುಖಂಡ ಹಾಗೂ ವಕೀಲ ರವಿ ಮಾವಿನಕುಂಟೆ ಮಾತನಾಡಿ, 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರ್ಕಾರ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಹಗರಣ ಮುಕ್ತ, ಪ್ರಗತಿ ಪರ ಚಿಂತನೆಗಳ ಆಡಳಿತದಿಂದಾಗಿ ಜನರ ಮೆಚ್ಚುಗೆ ಗಳಿಸಿದೆ ಎಂದು ನುಡಿದರು.

ADVERTISEMENT

ಭಾರತಕ್ಕೆ ಮೋದಿ ವಿಶ್ವ ಮನ್ನಣೆ ಗಳಿಸಿಕೊಟ್ಟಿದ್ದಾರೆ. ವಿದೇಶಿ ನಾಯಕರಿಂದ ಮೆಚ್ಚುಗೆ ಪಡೆದಿದ್ದಾರೆ. ಇಂತಹ ವ್ಯಕ್ತಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡುವುದು ದೇಶದ ಹಿತದೃಷ್ಟಿಯಿಂದ ಒಳಿತು. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಲು ಹಾಗೂ ಮೋದಿಯವರಿಗೆ ನೈತಿಕ ಬೆಂಬಲಸೂಚಿಸಲು ನಮೋ ಸೇನೆ ವತಿಯಿಂದ ಇಂದು ಸುದರ್ಶನ ಹೋಮ ನಡೆಸಲಾಗುತ್ತಿದೆ ಎಂದರು.

ನಮೋ ಸೇನೆಯ ಉಸ್ತುವಾರಿ ಎಸ್.ಎಂ. ಗೊಲ್ಲಹಳ್ಳಿ ಆರ್. ಬಸವರಾಜ್ ಮಾತನಾಡಿ, ನಮೋ ಸೇನೆ ಮೋದಿಯವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಹಲವು ಕ್ರೀಯಾಶೀಲ ಯೋಜನೆಗಳನ್ನು ಆಯೋಜಿಸಿದೆ. ಮೋದಿ ಕೈಗೊಂಡಿರುವ ಜನಪರ ಕಾರ್ಯಕ್ರಮಗಳನ್ನು ಜನತೆಯ ಮುಂದೆ ವಿವರಿಸುವುದು ಇದರಲ್ಲಿ ಮೊದಲನೆಯದಾಗಿದೆ ಎಂದರು.

ದೇಶದ ಭದ್ರತೆ ವಿಚಾರದಲ್ಲಿ ಕೈಗೊಂಡ ಕಠಿಣ ನಿಲುವಿನಿಂದಾಗಿ ಉಗ್ರರ ಉಪಟಳಕ್ಕೆ ಕಡಿವಾಣ ಚೀನಾ, ಪಾಕಿಸ್ತಾನಕ್ಕೆ ನೀಡಿರುವ ದಿಟ್ಟ ಉತ್ತರ, ವಿದೇಶಗಳಲ್ಲಿ ಭಾರತ ಕುರಿತು ಹೆಚ್ಚಿಸಿರುವ ಹಿರಿಮೆ, ಆರ್ಥಿಕ ಸ್ಥಿತಿಯ ಬಗ್ಗೆ ಮೋದಿಯವರ ಮುಂದಾಲೋಚನೆಗಳನ್ನು ಮತದಾರರಿಗೆ ಮತ್ತೊಮ್ಮೆ ತಿಳಿಸಲು ತೀರ್ಮಾನಿಸಲಾಗಿದೆ ಎಂದರು.

ಪ್ರಚಾರದ ಉಸ್ತುವಾರಿ ಕೆಂಪೆಗೌಡ, ಸದಸ್ಯರಾದ ಶಿವುಇಂದ್ರಿಯಾ, ತ್ಯಾಗರಾಜ್, ರಮೇಶ್, ಕೆಂಪೇಗೌಡ, ಹಿಂದೂ ಜಾಗರಣ ವೇದಿಕೆ ಮುಖಂಡ ಆನಂದ್, ನಂದಕುಮಾರ್, ಅರುಣ್, ಭಜರಂಗದಳದ ನರೇಶ್‌ರೆಡ್ಡಿ, ಮನು,
ಮಧುಬೇಗ್ಲಿ, ಗಿರೀಶ್, ಸಂಘದ ಮಹೇಶ್, ನಂದಕುಮಾರ್, ಎಸ್‌ಎಲ್‌ವಿ ಮೋಹನ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಎಸ್‌. ಶಿವಶಂಕರ್, ನಗರ ಸಭೆ ಸದಸ್ಯ ಕೆ.ಬಿ. ಮುದ್ದಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷೆ ಗಿರಿಜಾ, ಲೀಲಾ
ಮಹೇಶ್, ಕೃಷ್ಣ, ಉಮಾ ಮಹೇಶ್ವರಿ, ಕಮಲಮ್ಮ, ದ್ರಾಕ್ಷಾಯಿಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.