ADVERTISEMENT

ಹೊಸಕೋಟೆ: ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 12:49 IST
Last Updated 8 ಫೆಬ್ರುವರಿ 2020, 12:49 IST
ಹೊಸಕೋಟೆಯ ಎಂಟಿಬಿ ಭವನದಲ್ಲಿ ಬಿಜೆಪಿ ನಗರ ಅಧ್ಯಕ್ಷ ಸಿ. ಜಯರಾಜ್ ಪತ್ರಕರ್ತರೊಂದಿಗೆ ಮಾತನಾಡಿದರು.
ಹೊಸಕೋಟೆಯ ಎಂಟಿಬಿ ಭವನದಲ್ಲಿ ಬಿಜೆಪಿ ನಗರ ಅಧ್ಯಕ್ಷ ಸಿ. ಜಯರಾಜ್ ಪತ್ರಕರ್ತರೊಂದಿಗೆ ಮಾತನಾಡಿದರು.   

ಹೊಸಕೋಟೆ: ನಗರದ ಸರ್ವತೋಮುಖ ಅಭಿವೃದ್ಧಿಯಾಗಲು ಎಂ.ಟಿ.ಬಿ. ನಾಗರಾಜ್ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಗರಸಭೆಯ ಚುಕ್ಕಾಣಿ ಹಿಡಿಯಬೇಕು ಎಂದು ನಗರ ಬಿಜೆಪಿ ಅಧ್ಯಕ್ಷ ಸಿ. ಜಯರಾಜ್ ಹೇಳಿದ್ದಾರೆ.

ಅವರು ನಗರದ ಎಂಟಿಬಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾಗರಾಜ್ ಕಳೆದ ಎರಡು ಬಾರಿ ಶಾಸಕರಾಗಿದ್ದಾಗ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಅದು ಮುಂದುವರೆಯಬೇಕಾದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕು ಎಂದರು.

ತಾಲ್ಲೂಕಿನ ಶಾಸಕರು ಯಾರು ಅನ್ನುವುದಕ್ಕಿಂತ ತಾಲ್ಲೂಕನ್ನು ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಗಳಿಸುವ ವ್ಯಕ್ತಿ ಯಾರು ಎಂಬುದು ಮುಖ್ಯ. ಆ ಶಕ್ತಿ ಇರುವುದು ನಾಗರಾಜ್ ಅವರಿಗೆ ಎಂದರು.

ADVERTISEMENT

‘ನಗರದಲ್ಲಿ ನೀರಿನ ಸಮಸ್ಯೆ ಕಗ್ಗಂಟಾಗಿತ್ತು. ಸ್ವಂತ ಖರ್ಚಿನಲ್ಲಿ ನೂರಾರು ಬೋರ್‌ವೆಲ್‌ಗಳನ್ನು ಕೊರೆಸಿ ನಗರದ ಎಲ್ಲ ಕಡೆಗಳಿಗೆ ನಾಲ್ಕು ದಿನಕ್ಕೊಮ್ಮೆ ನೀರು ಬರುವಂತೆ ಮಾಡಿದ್ದಾರೆ. ಬೋರ್‌ವೆಲ್‌ಗಳ ನಿರ್ವಹಣೆಯನ್ನು ಪ್ರತಿ ವರ್ಷ ₹50 ರಿಂದ 60 ಲಕ್ಷವನ್ನು ಸ್ವಂತ ಖರ್ಚಿನಲ್ಲಿ ಮಾಡಿಸುತ್ತಿದ್ದರು’ ಎಂದು ವಿವರಿಸಿದರು.

ನಗರದ ಪುರಾತನ ದೇವಾಲಯಗಳನ್ನು ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂದರು.

ತಾಲ್ಲೂಕಿನ ಕೆರೆಗಳನ್ನು ತುಂಬುವ ಉದ್ದೇಶದಿಂದ ಕೆ.ಸಿ. ವ್ಯಾಲಿ ನೀರನ್ನು ತಾಲ್ಲೂಕಿಗೆ ತರಲಾಗಿದೆ. ಈಗಾಗಲೇ ತಾವರೆಕೆರೆ ಕೆರೆ ತುಂಬಿದೆ. ಉಳಿದ ಕೆರೆಗಳು ಹಂತಹಂತವಾಗಿ ತುಂಬಿ ಅಂತರ್‌ಜಲದ ಮಟ್ಟವೂ ಹೆಚ್ಚಾಗುತ್ತದೆ ಎಂದರು.

ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಖಂಡಿತವಾಗಿಯೂ ನಾಗರಾಜ್ ಗೆದ್ದು ಸಚಿವರಾಗುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಸಾವಿರಾರು ಕೋಟಿ ಅನುದಾನವನ್ನು ತಂದು ತಾಲ್ಲೂಕನ್ನು ಮುನ್ನಡೆಸುತ್ತಾರೆ. ಅದಕ್ಕಾಗಿ ತಾಲ್ಲೂಕಿನ ಮತದಾರರು ನಗರಸಭೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಶಶಿಧರ್, ಚೌಡಪ್ಪ ಹಾಗೂ ಶೌರತ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.