ದೊಡ್ಡಬಳ್ಳಾಪುರ: ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಹುಸ್ಕೂರು ಟಿ.ಆನಂದ್ ಸ್ಪರ್ಧಿಸಿದ್ದಾರೆ. ಇವರನ್ನು ಬೆಂಬಲಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಮುನೇಗೌಡ ಕೋರಿದರು.
ತಾಲ್ಲೂಕಿನಲ್ಲಿ ಜೆಡಿಎಸ್ ಪರವಾಗಿ ಮತದಾರರಿದ್ದಾರೆ. ಸಹಜವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವವರಿಗೆ ಪ್ರಾತಿನಿಧ್ಯ ನೀಡಬೇಕಿದ್ದು, ದೇವನಹಳ್ಳಿಯಲ್ಲಿ ಸಹ ಜೆಡಿಎಸ್ ಬೆಂಬಲಿತರನ್ನು ಕಣಕ್ಕಿಳಿಸಲಾಗಿದೆ. ತಾಲ್ಲೂಕಿನಲ್ಲಿ ಪಕ್ಷ ಸದೃಢವಾಗಿದೆ ಎನ್ನುವುದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅಭ್ಯರ್ಥಿಗೆ ಇತರ ಪಕ್ಷಗಳ ಬೆಂಬಲವನ್ನು ಸಹ ಕೋರಲಾಗಿದೆ ಎಂದು ಮಂಗಳವಾರ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ತಿಳಿಸಿದರು.
ಈ ಹಿಂದಿನ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಪ್ಪಯ್ಯಣ್ಣ ಅವರು ಬಮೂಲ್ನಲ್ಲಿ ಸಾಕಷ್ಟು ಕೆಲಸ ಮಾಡಿ, ಶೀಥಲೀಕರಣ ಘಟಕ ಸ್ಥಾಪಿಸಲು ಶ್ರಮಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ, ಬಮೂಲ್ ಚುನಾವಣೆಯ ಮತದಾರರು ಹುಸ್ಕೂರು ಟಿ.ಆನಂದ್ ಅವರನ್ನು ಬೆಂಬಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಇಲ್ಲದಿರುವುದರಿಂದ ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ. ಎಲ್ಲಾ ಪಕ್ಷದವರನ್ನು ಬೆಂಬಲಿಸಲು ಕೋರಲಾಗಿದೆ ಎಂದು ತಿಳಿಸಿದರು.
ಬಮೂಲ್ ಅಭ್ಯರ್ಥಿ ಹುಸ್ಕೂರು ಟಿ.ಆನಂದ್, ‘ಕೆಲವರು ಉದ್ದೇಶಪೂರ್ವಕವಾಗಿ ನನ್ನ ಮೇಲೆ ಪಿತೂರಿ ನಡೆಸಿ, ದೂರು ದಾಖಲಿಸಿದ್ದರು. ಆದರೆ ನ್ಯಾಯಾಲಯ ರ್ಸ್ಪರ್ಧಿಸಲು ಆದೇಶ ನೀಡಿದೆ. ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರಿಗೆ ಅಭಾರಿ. ನಿರ್ದೇಶಕನಾಗಿ ಆಯ್ಕೆಯಾದರೆ ಪ್ರಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡಲು ಯೋಜನೆ ರೂಪಿಸಿದ್ದೇನೆ’ ಎಂದು ತಿಳಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಡಾ.ಎಚ್.ಜಿ.ವಿಜಯಕುಮಾರ್, ಎಸ್.ಎಂ.ಹರೀಶ್ ಗೌಡ, ಜೆಡಿಎಸ್ ಮುಖಂಡರಾದ ಎ.ನರಸಿಂಹಯ್ಯ, ಸುಬ್ಬರಾಯಪ್ಪ, ಜಗನ್ನಾಥಾಚಾರ್, ರಂಗಸ್ವಾಮಿ, ಸತೀಶ್, ಜಗದೀಶ್, ಅಧ್ವತ್ಥನಾರಾಯಣ್, ನಾಗರಾಜ್, ದೇವರಾಜ್,ವಕ್ತಾರ ಕುಂಟನಹಳ್ಳಿ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ನಗರ ಘಟಕದ ಅಧ್ಯಕ್ಷೆ ಶಾಂತಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.