ಯಲಹಂಕ: 'ದೇವಾಲಯಗಳು ಕಷ್ಟದಲ್ಲಿರುವವರ ಮನಸ್ಸಿಗೆ ಶಾಂತಿ-ನೆಮ್ಮದಿ ಮತ್ತು ಪರಿಹಾರಗಳನ್ನು ನೀಡುವ ತಾಣಗಳಾಗಿವೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
‘ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಿಸುವುದರಿಂದ ಜನರು ಒಂದೆಡೆ ಬೆರೆತು, ಒಗ್ಗಟ್ಟು ಮೂಡುವುದರ ಜೊತೆಗೆ ನಮ್ಮ ಸನಾತನ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ’ ಎಂದರು.
ಬ್ಯಾಟರಾಯನಪುರ ಕ್ಷೇತ್ರದ ತರಹುಣಿಸೆ ಗ್ರಾಮದಲ್ಲಿ ಮಹಾಗಣಪತಿ, ಬಸವೇಶ್ವರಸ್ವಾಮಿ, ಮಹದೇಶ್ವರಸ್ವಾಮಿ, ವಿಮಾನಗೋಪುರ ಹಾಗೂ ನಾಗರದೇವತಾ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ದೇವರು, ಸಂಸ್ಕೃತಿ, ದೇಶ ಮತ್ತು ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕು. ಇದರಿಂದ ಸನಾತನ ಹಿಂದೂಧರ್ಮ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಪೂರಕವಾಗುತ್ತದೆ’ ಎಂದರು.
ತುಮಕೂರು ಸಿದ್ಧಗಂಗಾ ಕ್ಷೇತ್ರದ ಸಿದ್ಧಲಿಂಗ ಸ್ವಾಮೀಜಿ, ಕಂದಾಯ ಸಚಿವ ಕೃಷ್ಣಬೈರೇಗೌಡ, ಶಾಸಕ ಎಸ್.ಆರ್. ವಿಶ್ವನಾಥ್, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ.ಪ್ರಕಾಶ್, ಉಪಾಧ್ಯಕ್ಷ ಟಿ.ಪಿ.ಮುನೇಗೌಡ, ಕಾರ್ಯದರ್ಶಿ ಟಿ.ಎಸ್. ನಾಗರಾಜರಾವ್, ಖಜಾಂಚಿ ಟಿ.ಎಂ.ಶ್ರೀರಾಮ್, ಗ್ರಾಮಪಂಚಾಯಿತಿ ಅಧ್ಯಕ್ಷೆ ಹೇಮಾವತಿ ನಾಗರಾಜಬಾಬು, ಸದಸ್ಯ ಟಿ.ಎಸ್.ನವೀನ್ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.