ವಿಜಯಪುರ: ಅಕ್ಷರಾಭ್ಯಾಸಕ್ಕೆ ಮುಂಚೆ ಮಕ್ಕಳಿಗೆ ಚಿತ್ರ ಪರಿಚಯವಾಗಬೇಕು ಎಂದು ಬಸವ ಕಲ್ಯಾಣಮಠದ ಅದ್ಯಕ್ಷ ಮಹದೇವ ಸ್ವಾಮೀಜಿ ಹೇಳಿದರು.
ಇಲ್ಲಿನ ಅಶೋಕನಗರದಲ್ಲಿರುವ ಜೇಸಿಸ್ ಶಾಲೆಯಲ್ಲಿ ಆಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
‘ಈಗಿನ ಸಮಾಜದಲ್ಲಿ ಮಕ್ಕಳು ವಿಷಯಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹಿಂದಿನ ಕಾಲದ ಮಕ್ಕಳಿಗೆ ಹೋಲಿಸುವುದಕ್ಕೆ ಅಸಾಧ್ಯ. ಎರಡು ಅಥವಾ ಎರಡೂವರೆ ವರ್ಷ ತುಂಬಿದ ಮಕ್ಕಳು ಒಂದೊಂದು ವಸ್ತುಗಳ ವಿಷಯಗಳನ್ನು ತಿಳಿಯಬೇಕೆಂಬ ಕುತೂಹಲ ದಿನೇ ದಿನೇ ಹೆಚ್ಚಾಗುತ್ತದೆ. ಯಾವುದಕ್ಕೆ ಅಳಿವಿಲ್ಲವೋ ಅದು ಅಕ್ಷರ ಎಂದು ಅರ್ಥವಾಗುತ್ತದೆ. ಬರೆದ ಲಿಪಿಯಾದರೊ ಅಳಿಸಿ ಬಿಟ್ಟರೆ ನಾಶಹೊಂದುತ್ತದೆ. ಆಗ ಈ ಅಕ್ಷರ ಶಬ್ದ ಲಿಪಿಗೆ ಸರಿಯಾಗಿ ಹೊಂದುವುದಿಲ್ಲ. ಅಕ್ಷರಾಭ್ಯಾಸದೊಂದಿಗೆ ಅವರಿಗೆ ಸಂಸ್ಕಾರವನ್ನೂ ಕಲಿಸಬೇಕು’ ಎಂದರು.
ಜೇಸಿಸ್ ಸಂಸ್ಥೆಯ ಅಧ್ಯಕ್ಷ ಆರ್.ಸಿ.ಮಂಜುನಾಥ್ ಮಾತನಾಡಿ, ‘ವಿದ್ಯೆಯ ಆರಂಭವೇ ಒಂದು ಉತ್ತಮ ಸಂಸ್ಕಾರ. ಈ ಸಂಸ್ಕಾರವು ಬಹಳ ಪೂರ್ವದಿಂದಲೂ ಚೂಡಾಕರ್ಮದೊಡನೆಯೇ ಮಾಡುತ್ತಿದ್ದರು. ವಾಲ್ಮೀಕಿ ಮಹರ್ಷಿಗಳು ಲವ-ಕುಶರಿಗೆ ಚೂಡಾಕರ್ಮವಾದ ಮೇಲೆ ವಿದ್ಯಾರಂಭ ಮಾಡಿಸಿದರು. ಶಾಸ್ತ್ರದ ಪ್ರಕಾರ ಮಕ್ಕಳಿಗೆ ಐದನೇ ವರ್ಷ, ಐದನೇ ತಿಂಗಳ, ಐದನೇ ದಿನ ಅಕ್ಷರಾಭ್ಯಾಸ ಮಾಡಬೇಕು. ಈಗಿನ ಮಕ್ಕಳು ಈ ವೇಳೆಗಾಗಲೇ ಶಾಲೆಗೆ ಹೋಗುತ್ತಿರುತ್ತಾರೆ. ಆದ್ದರಿಂದ ಅವರ ಬೆಳವಣಿಗೆ ಮತ್ತು ಬುದ್ಧಿ ತಿಳಿಸುವ ಇದಕ್ಕೆ ಮುಂಚೆಯೇ ಅಕ್ಷರಾಭ್ಯಾಸ ಪ್ರಾರಂಭಿಸುವುದು ಉತ್ತಮವಾದ ಬೆಳವಣಿಗೆ. ಪೋಷಕರು ಮಕ್ಕಳ ಕುರಿತು ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಆಡಳಿತಾಧಿಕಾರಿ ಮಮತಾ ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ಮುಕುಂದರಾವ್, ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.