ದೊಡ್ಡಬಳ್ಳಾಪುರ: ತಾಲ್ಲೂಕಿನ ಇತಿಹಾಸ ಪ್ರಸಿದ್ಧಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 7 ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಪ್ರದಾಯದಂತೆ ಸುಬ್ರಹ್ಮಣ್ಯಸ್ವಾಮಿಗೆ ಪ್ರಧಾನ ಅರ್ಚಕ ಗುರುರಾಜಶರ್ಮ ಅಭಿಷೇಕ, ಮಹಾಮಂಗಳಾರತಿ ಸೇವೆ ನಡೆಸಿದರು.
ಹೊರಗಿನಿಂದ ಬಂದಿದ್ದ ಭಕ್ತಾದಿಗಳ ಸಂಖ್ಯೆಗಿಂತಲೂ ಸ್ಥಳೀಯರು ಹಾಗೂ ದೊಡ್ಡಬಳ್ಳಾಪುರ ನಗರದವರ ಸಂಖ್ಯೆಯೇ ಹೆಚ್ಚಾಗಿತ್ತು.ತೀರ್ಥ, ಪ್ರಸಾದ ವಿನಿಯೋಗ ಇರಲಿಲ್ಲ.
ಮಾರ್ಚ್ 21ರಂದು ಸಾರ್ವಜನಿಕರ ಪ್ರವೇಶಕ್ಕೆ ದೇವಾಲಯ ಬಂದ್ ಮಾಡಿದ ನಂತರ ಇದೇ ಮೊದಲ ಬಾರಿಗೆ ಸೋಮವಾರ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ದೇವಾಲಯವನ್ನು ತಳಿರು, ತೋರಣ, ಬಾಳೆ ಕಂಬಗಳಿಂದ ಅಲಂಕರಿಸಲಾಗಿತ್ತು.
ಕನಸವಾಡಿ: ಶನಿಮಹಾತ್ಮ ದೇವಾಲಯದಲ್ಲಿ ಬೆಳಿಗ್ಗೆ 8 ಗಂಟೆಯಿಂದಲೆ ದೇವರ ದರ್ಶನಕ್ಕೆ ಭಕ್ತಾದಿಗಳು ಸಾಲುಗಟ್ಟಿ ನಿಂತು ಪೂಜೆ ಸಲ್ಲಿಸಿದರು. ಬೆಂಗಳೂರು, ನೆಲಮಂಗಲ ಭಾಗಗಳಿಂದಲೂ ಭಕ್ತರು ಆಗಮಿಸಿದ್ದರು. ಸರ್ಕಾರದ ನಿಯಮಗಳನ್ನು ಪಾಲಿಸುವಂತೆ, ಅಂತರ ಕಾಪಾಡುವಂತೆ ತಿಳಿಸಲಾಗುತ್ತಿತ್ತು. ಅನ್ನದಾಸೋಹ ಭವನದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ದೊಡ್ಡಬಳ್ಳಾಪುರ ನಗರದ ತೇರಿನ ಬೀದಿಯಲ್ಲಿನ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ತೂಬಗೆರೆಯ ಲಕ್ಷ್ಮೀವೆಂಕಟೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳ ಬಾಗಿಲು ತೆರೆದಿದ್ದು ಪೂಜೆಗಳು ಆರಂಭವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.