ADVERTISEMENT

ದೇವನಹಳ್ಳಿ: ದಲಿತ ವಿರೋಧಿ ನೀತಿಗೆ ತಮಟೆ ಚಳವಳಿ

ನೂತನ ಮುಖಂಡರ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 6:38 IST
Last Updated 9 ಅಕ್ಟೋಬರ್ 2020, 6:38 IST
ನೂತನ ಪದಾಧಿಕಾರಿಗಳೊಂದಿಗೆ ಪಿ.ವಿ.ಬಿ.ಎಸ್ ಮುಖಂಡರು.
ನೂತನ ಪದಾಧಿಕಾರಿಗಳೊಂದಿಗೆ ಪಿ.ವಿ.ಬಿ.ಎಸ್ ಮುಖಂಡರು.   

ದೇವನಹಳ್ಳಿ: ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತದಲ್ಲಿ ದಲಿತ ವಿರೋಧಿ ನೀತಿಗಳು ಹೆಚ್ಚಾಗುತ್ತಿದ್ದು ಇದನ್ನು ವಿರೋಧಿಸಿ ಶೀಘ್ರದಲ್ಲೆ ಬೃಹತ್ ತಮಟೆ ಚಳವಳಿ ನಡೆಸಲಾಗುವುದು ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ತಿಳಿಸಿದರು.

ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ವಿವಿಧ ಸಂಘಟನೆಗಳಿಂದ ಸೇರ್ಪಡೆಗೊಂಡ ನೂತನ ಮುಖಂಡರನ್ನು ಸಮಿತಿಗೆ ಸೇರ್ಪಡೆ ಮತ್ತು ನೂತನ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿದರು.

‘40 ವರ್ಷಗಳಿಂದ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಿಲ್ಲ. ಕಳೆದ ಎರಡು ವರ್ಷಗಳಿಂದ ವಸತಿ ಯೋಜನೆ ಸ್ಥಗಿತಗೊಂಡಿದೆ. ಈಗಾಗಲೇ ವಸತಿ ಯೋಜನೆಯಡಿ ಆಯ್ಕೆಗೊಂಡಿರುವವರು ಹಳೆ ಮನೆಗಳನ್ನು ಕಿತ್ತುಹಾಕಿ ಅಡಿಪಾಯ ಹಾಕಿದ್ದು ಎರಡು ವರ್ಷದದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದರೆ ಸರ್ಕಾರ ಯಾವ ರೀತಿ ದಲಿತರ ಬಗ್ಗೆ ಕಾಳಜಿ ವಹಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ದೂರಿದರು.

ADVERTISEMENT

ಸರ್ಕಾರದ ಯೋಜನೆಗಳು ಬಲಿತ ದಲಿತ ಬಲಾಢ್ಯರಿಗೆ ಸಿಮಿತವಾಗಿದೆ, ಅನಕ್ಷರಸ್ಥ ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ, ಬಲಿತ ದಲಿತ ಕುಟುಂಬಗಳ ಸದಸ್ಯರ ಸುತ್ತ ಪ್ರತಿಯೊಂದು ಯೋಜನೆಗಳು ಗಿರಕಿ ಹೊಡೆಯುತ್ತಿವೆ, ಜನಪ್ರತಿನಿಧಿಗಳ ಹಿಂಬಾಲಕರಿಗೆ ಪಕ್ಷಗಳ ಮುಖಂಡರ ಹಿಂಬಾಲಕರಿಗೆ ಮಾತ್ರ ಯೋಜನೆಗಳು ಸಿಮಿತವಾಗಿದೆ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಎರಡು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಿವೆ, ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ದಲಿತರಿಗೆ ಸಿಗಬೇಕಾದ ಮೂಲ ಸೌಲಭ್ಯಗಳು ಸಿಗುತ್ತಿಲ್ಲ, ಹಾಥರಸ್ ಘಟನೆಗೆ ಸಂಬಂಧಿಸಿದಂತೆ ದಲಿತ ಯುವತಿ ಬಗ್ಗೆ ಕನಿಷ್ಠ ಸಂತಾಪ ಸಲ್ಲಿಸಿಲ್ಲ. ದಲಿತ ಶಾಸಕರು ಎಲ್ಲಾ ಪಕ್ಷದಲ್ಲಿ ಇದ್ದರೂ ಘಟನೆಯನ್ನು ಪಕ್ಷಾತೀತವಾಗಿ ಖಂಡಿಸಿ ಕೇಂದ್ರಕ್ಕೆ ಸ್ಪಷ್ಟ ಸಂದೇಶ ನೀಡುವಲ್ಲಿ ವಿಫಲವಾಗಿದ್ದಾರೆ’ ಎಂದು ದೂರಿದರು.

‘ದೇಶದಲ್ಲಿ ಬರಿ ಹಾಥರಸ್ ಘಟನೆ ಒಂದೇ ಅಲ್ಲ, ಅತ್ಯಾಚಾರ, ಹತ್ಯೆ, ಮಾರಣಾಂತಿಕ ಹಲ್ಲೆ ನಿರಂತರ ನಡೆಯುತ್ತಿದ್ದು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಅತಿಹೆಚ್ಚು ಘಟನೆ ನಡೆಯುತ್ತಿದ್ದರೂ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಮಟೆ ಚಳವಳಿ ನಡೆಸಲಾಗುವುದು’ ಎಂದರು.

ಸಮಿತಿ ತಾಲ್ಲೂಕು ಘಟಕ ಸೋಲೂರು ನಾಗರಾಜ್ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.