ADVERTISEMENT

ಖಾಸಗಿ ಶಾಲೆಗಳನ್ನು ಮುಚ್ಚಿಸುವ ಹುನ್ನಾರ

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕ್ಯಾಮ್ಸ್‌ನಿಂದ ಫೆ.23ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 6:41 IST
Last Updated 15 ಫೆಬ್ರುವರಿ 2021, 6:41 IST
ಆನೇಕಲ್ ತಾಲ್ಲೂಕಿನ ಹೀಲಲಿಗೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕ್ಯಾಮ್ಸ್‌ನ ಆನೇಕಲ್ ಘಟಕದ ಪದಾಧಿಕಾರಿಗಳು ಮಾಹಿತಿ ನೀಡಿದರು
ಆನೇಕಲ್ ತಾಲ್ಲೂಕಿನ ಹೀಲಲಿಗೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕ್ಯಾಮ್ಸ್‌ನ ಆನೇಕಲ್ ಘಟಕದ ಪದಾಧಿಕಾರಿಗಳು ಮಾಹಿತಿ ನೀಡಿದರು   

ಆನೇಕಲ್ : ಶಾಲಾ ಶುಲ್ಕ ಶೇ30ರಷ್ಟು ಕಡಿತಗೊಳಿಸುವುದು ಅವೈಜ್ಞಾನಿಕ. ಸರ್ಕಾರದ ತೀರ್ಮಾನದಿಂದ ಖಾಸಗಿ ಶಾಲೆ ನಡೆಸುವುದೇ ಕಷ್ಟಕರ. ಹಾಗಾಗಿ ಸರ್ಕಾರ ತೀರ್ಮಾನ ಹಿಂಪಡೆಯಬೇಕು ಎಂದು ಒತ್ತಾಯಿಸಿ ಫೆ.23ರಂದು ಕ್ಯಾಮ್ಸ್‌ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾಮ್ಸ್‌ನ ಆನೇಕಲ್‌ ಘಟಕದ ಪ್ರಧಾನ ಕಾರ್ಯ
ದರ್ಶಿ ಬಿ.ಎಸ್‌.ಶೇಖರ್‌ ತಿಳಿಸಿದರು.

ತಾಲ್ಲೂಕಿನ ಹೀಲಲಿಗೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೊರೊನಾ ಹಿನ್ನೆಲೆಯಿಂದಾಗಿ ಈ ವರ್ಷ ಖಾಸಗಿ ಶಾಲೆಗಳ ದಾಖಲಾತಿ ನಡೆದಿಲ್ಲ. ಸರ್ಕಾರ ಘೋಷಿಸುವ ಮುನ್ನವೇ ಶೇ15-20ರಷ್ಟು ಶುಲ್ಕ ರಿಯಾಯಿತಿ ಶಾಲೆಗಳು ಘೋಷಣೆ ಮಾಡಿದ್ದವು. ಶೇ50ರಷ್ಟು ಸಹ ಶುಲ್ಕ ವಸೂಲಿಯಾಗಿಲ್ಲ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ನೀಡಬೇಕಾಗಿದೆ. ಶುಲ್ಕ ವಸೂಲಾತಿ ಯಿಲ್ಲದೇ ಸಂಸ್ಥೆಗಳನ್ನು ನಡೆಸುವುದು ಕಷ್ಟವಾಗಿದೆ ಎಂದರು.

ಕ್ಯಾಮ್ಸ್‌ ನಿರ್ದೇಶಕ ಎನ್‌.ಸುರೇಶ್‌ ಮಾತನಾಡಿ, 2021ನೇ ಸಾಲಿನ ಸರ್ಕಾರ ಖಾಸಗಿ ಶಾಲೆಗಳ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಇದರಿಂದ ಖಾಸಗಿ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. 2021ನೇ ಸಾಲಿನ ಆರ್‌ಟಿಇ ಹಣ ಇದುವರೆಗೆ ನೀಡಿಲ್ಲ. ಖಾಸಗಿ ಶಾಲೆಗಳ ಶಿಕ್ಷಕರಿಗೆ ಪ್ಯಾಕೇಜ್‌ ನೀಡುವಂತೆ ಹಲವು ಬಾರಿ ಶಿಕ್ಷಣ ಸಚಿವರಲ್ಲಿ ಮನವಿ ಸಲ್ಲಿಸಿದರೂ ಪ್ಯಾಕೇಜ್‌ ನೀಡಿಲ್ಲ. ಶಿಕ್ಷಣ ವ್ಯವಸ್ಥೆ ಭಾಗವಾಗಿರುವ ಖಾಸಗಿ ಶಾಲಾ ಶಿಕ್ಷಕರ ಬಗ್ಗೆ ಸರ್ಕಾರ ಅಸಡ್ಡೆ ತೋರುತ್ತಿದೆ. ಬೇಡಿಕೆಗಳ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿದೆ. ಹಾಗಾಗಿ ಬೃಹತ್‌ ಪ್ರತಿಭಟನೆ ಫೆ.23ರಂದು ನಡೆಸುವ ಮೂಲಕ ಖಾಸಗಿ ಶಾಲೆಗಳ ಬೇಡಿಕೆಗಳಿಗೆ ಹಕ್ಕೋ
ತ್ತಾಯ ಮಾಡಲಾಗುವುದು ಎಂದರು.

ADVERTISEMENT

ಕ್ಯಾಮ್ಸ್‌ನ ಉಪಾಧ್ಯಕ್ಷ ಅಜ್ಜಪ್ಪ ಮಾತನಾಡಿ, ಖಾಸಗಿ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳ ನಡುವೆ ತಾರತಮ್ಯ ಮಾಡುತ್ತಿದೆ. ಮಾನ್ಯತೆ ನವೀಕರಣ ಮಾಡುವ ಸಂದರ್ಭದಲ್ಲಿ ಕಟ್ಟಡ ಸುರಕ್ಷತೆ, ಸ್ವಚ್ಛತೆ, ಅಗ್ನಿಸುರಕ್ಷತಾ ಪ್ರಮಾಣಪತ್ರಗಳಿಗೆ ಒತ್ತಾಯ ಮಾಡುತ್ತಿದೆ. ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಇವುಗಳ ಅವಶ್ಯಕ. ಆದರೆ, ಸರ್ಕಾರಿ ಶಾಲೆಗಳಲ್ಲೂ ಇವುಗಳನ್ನು ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರಿ ಶಾಲೆಗಳಿಗೆ ವಿನಾಯಿತಿ ನೀಡಿ ಖಾಸಗಿ ಶಾಲೆಗಳ ಮೇಲೆ ಒತ್ತಡ ಹೇರುವ ಮೂಲಕ ಸಂಪೂರ್ಣ ಮುಚ್ಚಲು ಹುನ್ನಾರ ನಡೆಸಿದೆ ಎಂದರು.

1-5ನೇ ತರಗತಿ ಶಾಲಾ ಪ್ರಾರಂಭದ ಬಗ್ಗೆ ಇನ್ನೂ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಿನಿಮಾ ಮಂದಿರ, ಮಾಲ್‌ಗಳು ಎಲ್ಲವೂ ಪ್ರಾರಂಭವಾಗಿದ್ದರೂ ಶಾಲೆಗಳ ಬಗ್ಗೆ ಮಾತ್ರ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ಹಾಗಾಗಿ ಕೂಡಲೇ ತೀರ್ಮಾನ ಕೈಗೊಳ್ಳಬೇಕು. ಶಾಲೆಗೆ ದಾಖಲಾಗದ ವಿದ್ಯಾರ್ಥಿಗಳನ್ನು ಈ ವರ್ಷ ತೇರ್ಗಡೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡಬೇಕು ಎಂದು ಮನವಿ ಮಾಡಿದರು.

ಕ್ಯಾಮ್ಸ್‌ನ ಪದಾಧಿಕಾರಿಗಳಾದ ರವಿಕುಮಾರ್, ಜ್ಯೋತಿ ಗೌಡ, ವಿನಯ್‌, ಅಶ್ವಥ್‌, ರಾಜೇಶ್‌ ನಾಯ್ಕ್, ಆನಂದ್‌ ಸಿಂಗ್‌, ಲಕ್ಷ್ಮಣ್‌, ಶ್ರೀರಾಮ್‌, ಮುನಿರಾಜು, ಕೃಷ್ಣಪ್ಪ, ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.