ದೊಡ್ಡಬಳ್ಳಾಪುರ:‘ಕಾಂಗ್ರೆಸ್ ಹಾಗೂ ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದ ದೇಶದಾದ್ಯಂತ ಕಾನೂನು ಸುವ್ಯವಸ್ತೆಗೆ ಭಂಗ ಬಂದಿದೆ’ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಹೇಳಿದರು.
ಇಲ್ಲಕಿನ ಬಿಎಸ್ಪಿ ಕಚೇರಿಯಲ್ಲಿ ಮಾಯಾವತಿ ಅವರ 64ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಹಣ ಬಲದಿಂದ ರಾಜಕೀಯ ಮಾಡುವ ಇಂದಿನ ದಿನಗಳಲ್ಲಿ ಬಡವರ ಪರವಾಗಿ ಧನಿ ಎತ್ತುವ ಪಕ್ಷ ಬಿಎಸ್ಪಿ ಮಾತ್ರ. ಕಾನ್ಸಿರಾಮ್ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಬಿಎಸ್ಪಿ ನಾಯಕಿ ಮಾಯಾವತಿ ಭೂಮಿ ಹಂಚಿಕೆ, ಮೇಲ್ವರ್ಗದವರು ಸೇರಿದಂತೆ ಎಲ್ಲರಿಗೂ ಮೀಸಲಾತಿ ಕಲ್ಪಿಸಿದ್ದರು. ಆದರೆ ಇಂದು ಬಡ ಹಾಗೂ ಮಧ್ಯಮ ವರ್ಗದವರು ಬದುಕು ನಡೆಸಲು ಪ್ರಯಾಸ ಪಡುವ ವಾತಾವರಣ ನಿರ್ಮಾಣವಾಗಿದೆ’ ಎಂದು ಹೇಳಿದರು.
‘ಜನರನ್ನು ದಿಕ್ಕು ತಪ್ಪಿಸಲು ಪೌರತ್ವ ತಿದುಪಡಿ ಕಾಯ್ದೆ, 370ನೇ ವಿಧಿಯಂತಹ ಮಸೂದೆಗಳನ್ನು ಮಂಡಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಳ್ವಿಕೆಯಿಂದ ಜನರು ಕಂಗೆಟ್ಟಿದ್ದು, ಬದಲಿ ರಾಜಕಾರಣ ಬಯಸುತ್ತಿದ್ದಾರೆ. ಮಾಯಾವತಿ ಅವರಿಗೆ ಶೋಷಿತರ, ದಲಿತರ ಬೆಂಬಲ ಸಿಗಲಿದೆ’ ಎಂದರು.
ಬಿ.ಎಸ್.ಪಿ ತಾಲ್ಳೂಕು ಘಟಕದ ಅಧ್ಯಕ್ಷ ಹನುಮಂತೇಗೌಡ, ಉಸ್ತುವಾರಿ ಕೆ.ವಿ.ಮುನಿಯಪ್ಪ, ನಗರ ಘಟಕದ ಅಧ್ಯಕ್ಷ ಆಂಜಿನಪ್ಪ, ಪ್ರಧಾನ ಕಾರ್ಯದರ್ಶಿ ನರೇಂದ್ರಮೂರ್ತಿ, ಕಚೇರಿ ಕಾರ್ಯದರ್ಶಿ ಎನ್.ಎಂ.ದಾಳಪ್ಪ, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಕಮಲಮ್ಮ, ಮುಖಂಡರಾದ ದೊಡ್ಡಯ್ಯ, ಚೆನ್ನಿಗರಾಯಪ್ಪ, ಮೈಲಾರಪ್ಪ, ನಂಜೇಶ್, ಪೂಜಪ್ಪ, ಮುನಿರಾಜು, ಮೂರ್ತಿ, ರವಿಕುಮಾರ್, ಡಿ.ಕೆ.ಬಾಬು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.