ADVERTISEMENT

ಸಮಸ್ಯೆ ಪರಿಹಾರಕ್ಕೆ ಸ್ಥಳೀಯರ ಸಹಕಾರ ಅಗತ್ಯ 

ದಲಿತರ ದಿನ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಸುಬ್ರಮಣಿ ಮನವಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 12:58 IST
Last Updated 8 ಫೆಬ್ರುವರಿ 2020, 12:58 IST
ಕುಂದು ಕೊರತೆ ಸಭೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಸುಬ್ರಮಣಿ ಮಾತನಾಡಿದರು
ಕುಂದು ಕೊರತೆ ಸಭೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಸುಬ್ರಮಣಿ ಮಾತನಾಡಿದರು   

ದೇವನಹಳ್ಳಿ: ‘ದಲಿತರ ಕುಂದು ಕೊರತೆಗಳ ಸಮಸ್ಯೆಗಳ ಕಾನೂನುನಾತ್ಮಕ ಪರಿಹಾರಕ್ಕೆ ಸ್ಥಳೀಯರು ಸಹಕಾರ ನೀಡಬೇಕು’ ಎಂದು ಸಹಾಯಕ ಪೊಲೀಸ್ ಆಯುಕ್ತ ಸುಬ್ರಮಣಿ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ನಗರ ಪೊಲೀಸ್ ಈಶಾನ್ಯ ವಿಭಾಗ ದೇವನಹಳ್ಳಿ ಉಪವಿಭಾಗದ ವತಿಯಿಂದ ನಡೆದ ದಲಿತರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಪಡೆದು ಏಳು ದಶಕ ಕಳೆದರೂ ದಲಿತರ ಮೇಲೆ ದೌರ್ಜನ್ಯ, ಹಲ್ಲೆ, ಅತ್ಯಾಚಾರ ನಿಂತಿಲ್ಲ. ಹಾಗಾಗಿ ದಲಿತರಿಗೆ ಕನಿಷ್ಠ ಎರಡು ತಿಂಗಳಿಗೊಮ್ಮೆ ಕುಂದು ಕೊರತೆ ಸಭೆ ನಡೆಸಲು ಇಲಾಖೆ ಮುಂದಾಗಿದೆ. ಇದನ್ನು ಸಮುದಾಯ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಕುಡಿದ ಅಮಲಿನಲ್ಲಿ ಶಾಂತಿ ಭಂಗ ಮಾಡುವುದು, ಯುವತಿಯರನ್ನು ಚುಡಾಯಿಸುವುದು ಮಾಡಬಾರದು. ದರೋಡೆ, ಕಳ್ಳತನ, ದೌರ್ಜನ್ಯಕ್ಕೆ ಕಳೆದ ಆರು ತಿಂಗಳಿಂದ ಕಡಿವಾಣ ಬಿದ್ದಿದೆ’ ಎಂದು ಹೇಳಿದರು.

‘ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಿದ ನಂತರ, ಆರೋಪಿಗಳು ಮತ್ತೆ ದಲಿತರ ವಿರುದ್ಧ ದೂರು ನೀಡಿದಾಗ ಸತ್ಯಾಸತ್ಯತೆಯಿಂದ ಪರಿಶೀಲಿಸಿ ಅಗತ್ಯವಿದ್ದರೆ ಪ್ರಕರಣ ದಾಖಲಿಸಿಬೇಕು ಎಂಬುದು ಇಲಾಖೆ ಕಾನೂನು. ಸುಳ್ಳು ಆರೋಪ ಎಂದು ಕಂಡು ಬಂದಲ್ಲಿ ಬಿ ರೀಪೊರ್ಟ್ ಹಾಕಬೇಕಾಗುತ್ತದೆ. ದಲಿತರು ಘಟನೆಗಳ ವಾಸ್ತವವನ್ನು ದೂರಿನಲ್ಲಿ ದಾಖಲಿಸಬೇಕು’ ಎಂದರು.

‘ಸಾರ್ವಜನಿಕ ಸಮಸ್ಯೆಗಳಿದ್ದರೆ ನೇರವಾಗಿ ಠಾಣೆಗೆ ಬಂದು ಹೇಳಿದರೆ ಸಾಕು. ಅಂತಹವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಯಾವುದೇ ಸಂದರ್ಭದಲ್ಲಿ ಠಾಣೆಗೆ ಬರಲು ಮುಕ್ತ ಅವಕಾಶವಿದೆ. ಭಯ ಪಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.

‘ಕೆಲ ಮುಖಂಡರು ಭೂವನಹಳ್ಳಿ ಬಳಿ ರಸ್ತೆಗೆ ಫ್ಲೈಓವರ್ ನಿರ್ಮಾಣ ಮಾಡಬೇಕು, ಸಂಚಾರ ಸಮಸ್ಯೆ ಹೆಚ್ಚುತ್ತಿದೆ, ರಸ್ತೆಯಲ್ಲೆ ವ್ಯಾಪಾರ ವಾಹಿವಾಟು ನಡೆದಿದೆ, ಟೋಲ್ ಗೇಟ್ ಬಳಿ ಸರ್ವಿಸ್ ರಸ್ತೆಯಾಗಿಲ್ಲ, ಪಿ.ಟಿ.ಸಿ.ಎಲ್ ಪ್ರಕರಣದಂತಹ ಸಮಸ್ಯೆ ಹೇಳಿಕೊಂಡಿದ್ದಾರೆ. ನಾವು ನಮ್ಮ ವ್ಯಾಪ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಇತರ ಇಲಾಖೆಗೆ ಸಮಸ್ಯೆಯನ್ನು ಲಿಖಿತವಾಗಿ ಕಳುಹಿಸಬಹುದು ಅಷ್ಟೆ’ ಎಂದರು.

‘ವಿಮಾನ ನಿಲ್ದಾಣ ಆರಂಭಗೊಂಡ ನಂತರ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಮನೆ ಮಾಲೀಕರರು ಸಂಪೂರ್ಣ ಮಾಹಿತಿ ಪಡೆದು ಮನೆ ಬಾಡಿಗೆ ನೀಡಬೇಕು. ಅನುಮಾನಾಸ್ಪದವಾಗಿ ಕಂಡು ಬರುವ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

ದೇವನಹಳ್ಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಿದ್ದರಾಜು, ದಲಿತವಿವಿಧ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.