ಕನಸವಾಡಿ (ದೊಡ್ಡಬಳ್ಳಾಪುರ): ಸಂಸ್ಕೃತಿಯ ಮೂಲವಾದ ಜಾನಪದ ಕಲೆಗಳು ಇಂದು ಪಾಶ್ಚಿಮಾತ್ಯ ಕಲೆಗಳ ಪ್ರಭಾವದಿಂದ ನೇಪಥ್ಯಕ್ಕೆ ಸರಿಯುತ್ತಿವೆ. ಜಾನಪದ ಪರಂಪರೆಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಉತ್ತಮ ವೇದಿಕೆಗಳ ಅಗತ್ಯವಿದೆ ಎಂದು ಹಿರಿಯ ಬಿಜೆಪಿ ಮುಖಂಡ ಸಿ.ಡಿ.ಸತ್ಯನಾರಾಯಣಗೌಡ ಹೇಳಿದರು.
ಅವರು ತಾಲ್ಲೂಕಿನ ಕನಸವಾಡಿಯಲ್ಲಿ, ಪ್ರತಿಭಾ ಜಾನಪದ ಕಲಾ ವೃಂದ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಸಾಂಸ್ಕೃತಿಕ ಕಲಾ ಮಹೋತ್ಸವ-2021 ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ಕಲೆ ಎಲ್ಲಾ ಸಂಸ್ಕೃತಿಗಳ ತಾಯಿ ಬೇರಾಗಿದೆ.ಜನಪದ ಕಲೆಯನ್ನುಉಳಿಸಿ ಬೆಳೆಸುವ ದಿಸೆಯಲ್ಲಿ ಸರ್ಕಾರ ಜನಪದ ಹಾಗೂ ಇತರ ಕಲಾ ಪ್ರಕಾರಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮಗಳಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕಿದೆ. ಸಂಘಟನೆಗಳು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು
ತಿಳಿಸಿದರು.
ಆದಿಶಕ್ತಿ ಅಮ್ಮನಗುಡ್ಡ ಕ್ಷೇತ್ರದ ಪೀಠಾಧ್ಯಕ್ಷ ನರಸಿಂಹಮೂರ್ತಿ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ,ಗ್ರಾಮೀಣ ಭಾಗದಲ್ಲಿ ಇಂದಿಗೂ ಅಸಂಖ್ಯಾತ ಕಲಾವಿದರು ಎಲೆ ಮರೆಯ ಕಾಯಂತಿದ್ದಾರೆ. ಇಂತಹವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕಿದೆ.ಸಂಘಟನೆಗಳೊಂದಿಗೆ ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದರು. ಸಮಾರಂಭದಲ್ಲಿ ಹಿರಿಯ ಕಲಾವಿದರಿಗೆ ರಂಗಸಿರಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಚನ್ನಮ್ಮರಾಮಲಿಂಗಯ್ಯ, ಶನಿಮಹಾತ್ಮ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೆ.ವಿ.ಪ್ರಕಾಶ್,ಪ್ರತಿಭಾ ಜಾನಪದ ಕಲಾ ವೃಂದದ ಅಧ್ಯಕ್ಷ ಎಸ್.ಬಿ.ಹನುಮಂತರಾಯಪ್ಪ,ಪ್ರಧಾನ ಕಾರ್ಯದರ್ಶಿ ಎಚ್.ರತ್ನಮ್ಮ, ಕಲಾವಿದ ವಿ.ರಾಮಚಂದ್ರ ಇದ್ದರು.
ಕಲಾಮಹೋತ್ಸವದ ಅಂಗವಾಗಿ, ವಿವಿಧ ಕಲಾತಂಡಗಳು ಹಾಗೂ ಕಲಾವಿದರಿಂದ ಸುಗಮ ಸಂಗೀತ, ಸಮೂಹ ನೃತ್ಯ, ಜಾನಪದ ನೃತ್ಯ, ತತ್ವಪದ ಗಾಯನ ಸೋಮನ ಕುಣಿತ, ವೀರಗಾಸೆ, ಡೊಳ್ಳುಕುಣಿತ ಪ್ರದರ್ಶನಗಳು ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.