ADVERTISEMENT

ಆರೋಪದಲ್ಲಿ ಯಾವುದೇ ಹುರುಳಿಲ್ಲ: ಸಿ.ಮುನಿರಾಜು

ಸರ್ಕಾರದ ಸಕ್ಕರೆ ವಂಚನೆ ಪ್ರಕರಣ: ಬಿಜೆಪಿ ಮುಖಂಡ ಸಿ.ಮುನಿರಾಜು ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2020, 13:20 IST
Last Updated 3 ಮೇ 2020, 13:20 IST
ಸಿ.ಮುನಿರಾಜು
ಸಿ.ಮುನಿರಾಜು   

ಆನೇಕಲ್: ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೂಲಿಕಾರ್ಮಿಕರಿಗೆ, ರೈತರಿಗೆ, ಬಡವರಿಗೆ ಪೂರೈಕೆ ಮಾಡುವ ಸಲುವಾಗಿ ಪ್ಯಾಕಿಂಗ್‌ ಮಾಡಲು ಸರ್ಜಾಪುರ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಘಟಕಕ್ಕೆ ನೀಡಲಾಗಿತ್ತು. ಆದರೆ, ರಾಜಕೀಯ ಕಾರಣಗಳಿಗಾಗಿ ಸಂಸದ ಡಿ.ಕೆ ಸುರೇಶ್ ಮತ್ತು ಶಾಸಕ ಬಿ.ಶಿವಣ್ಣ ಸರ್ಕಾರದ ಸಕ್ಕರೆ ವಂಚಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೊರವರ್ತುಲ ರಸ್ತೆ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು ಸ್ಪಷ್ಟನೆ ನೀಡಿದರು.

ಸರ್ಜಾಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸುಮಾರು 7 ಸಾವಿರ ಕುಟುಂಬಗಳಿಗೆ ತಲಾ ಹತ್ತು ಕೆಜಿ ಅಕ್ಕಿ, ಸಕ್ಕರೆ, ಬೇಳೆ ಮತ್ತು ತರಕಾರಿ ವಿತರಿಸಲು ಪಾಕೆಟ್‌ಗಳನ್ನು ಮಾಡುವ ಸಲುವಾಗಿ ಘಟಕಕ್ಕೆ ನೀಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯಾವುದೇ ಆರ್ಡರ್‌ ಇಲ್ಲದೆ ಇದ್ದುದ್ದರಿಂದ ಘಟಕದವರು ಸೇವಾ ದೃಷ್ಟಿಯಿಂದ ಪಾಕೆಟ್‌ ಮಾಡಲು ಒಪ್ಪಿದ್ದರು. ಇಲ್ಲಿ ಆಧುನಿಕ ಯಂತ್ರಗಳಿವೆ. ತ್ವರಿತವಾಗಿ ಪಾಕೆಟ್‌ ಮಾಡಲು ಅವಕಾಶವಿದೆ. ಹಾಗಾಗಿ ಇಲ್ಲಿ ನೀಡಲಾಗಿತ್ತು. ಈ ಸಂದ
ರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದ ಸಂಸದ ಡಿ.ಕೆ.ಸುರೇಶ್‌ ಮತ್ತು ಶಾಸಕ ಬಿ.ಶಿವಣ್ಣ ಸರ್ಕಾರದಿಂದ ಪೂರೈಸಿರುವ ಸಕ್ಕರೆ ಪಾಕೆಟ್‌ಗಳನ್ನು ರಿಲೇಬಲ್‌ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರದಿಂದ ಈ ಘಟಕಕ್ಕೆ ಸಕ್ಕರೆಯಾಗಲಿ ಯಾವುದೇ ದಿನಸಿ ನೀಡುವುದಿಲ್ಲ. ಸ್ವತಃ ಘಟಕದವರು ಇಲಾಖೆಯ ಆರ್ಡರ್‌ನಂತೆ ಮುಕ್ತ ಮಾರುಕಟ್ಟೆಯಲ್ಲಿ ಕೊಂಡು ಪಾಕೆಟ್‌ ಮಾಡಿ ಸರ್ಕಾರದಿಂದ ಬಿಲ್‌ ಪಡೆಯುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಸಕ್ಕರೆ ದುರುಪಯೋಗದ ಪ್ರಶ್ನೆ ಬರಲು ಸಾಧ್ಯವೇ ಇಲ್ಲ. ರಾಜಕೀಯ ಕಾರಣಗಳಿಗಾಗಿ ಇಂತಹ ಹೇಳಿಕೆ ನೀಡಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ದೂರು ದಾಖಲಿಸಲಾಗಿದೆ. ಈ ಸಂಬಂಧ ಯಾವುದೇ ತನಿಖೆಗೂ ಸಿದ್ಧ ಎಂದರು.

ADVERTISEMENT

ಭೇಟಿ: ಘಟಕಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ ವಿಜಯಪ್ರಕಾಶ್‌, ಉಪನಿರ್ದೇಶಕಿ ಉಷಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣ ದಾಖಲು: ಘಟನೆ ಸಂಬಂಧ ಆನೇಕಲ್‌ ಸಿಡಿಪಿಒ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ಮುನಿರಾಜು ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.