ವಿಜಯಪುರ: ಕೊಳವೆ ಬಾವಿ ನೀರು ಅವಲಂಬಿಸಿ ದ್ರಾಕ್ಷಿ ಬೆಳೆದಿರುವ ರೈತರಿಗೆ ಈಗ ನುಸಿರೋಗ ಕಾಟ. ಬಿಸಿಲಿನ ತಾಪಮಾನದಿಂದಾಗಿ ’ಥ್ರಿಪ್ಸ್’ ಎನ್ನುವ ನುಸಿರೋಗ ಬೆಳೆಗೆ ಹರಡಿದ್ದು ಕಂಟಕವಾಗಿ ರೈತರನ್ನು ಕಾಡುತ್ತಿದೆ.
ದ್ರಾಕ್ಷಿ ಬೆಳೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಹೋಬಳಿಯ ಹಾರೋಹಳ್ಳಿ, ಇರಿಗೇನಹಳ್ಳಿ, ಬಿಜ್ಜವಾರ, ಮುದುಗುರ್ಕಿ, ವೆಂಕಟಗಿರಿಕೋಟೆ, ಗೊಡ್ಲುಮುದ್ದೇನಹಳ್ಳಿಪುರ, ಚನ್ನರಾಯಪಟ್ಟಣ ಹೋಬಳಿ ಬೀಡಿಗಾನಹಳ್ಳಿ, ದಿನ್ನೂರು, ಮಂಡಿಬೆಲೆ ಮುಂತಾದ ಕಡೆ ರೈತರು ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ ಎಂದು ರೈತ ವೆಂಕಟೇಶ್ ಮಾಹಿತಿ ನೀಡಿದರು.
ಬೇಸಿಗೆ ಆರಂಭಕ್ಕೂ ಮುನ್ನವೇ ಈ ಭಾಗದಲ್ಲಿ ಉಷ್ಣಾಂಶ 35 ಡಿಗ್ರಿಗೂ ಹೆಚ್ಚು ದಾಖಲಾಗಿದ್ದು ಗಿಡ –ಮರಗಳು ಒಣಗುತ್ತಿವೆ. ಥ್ರಿಪ್ಸ್ ನುಸಿರೋಗ ದ್ರಾಕ್ಷಿ ಬೆಳೆಗಳ ಮೇಲೆ ದಾಳಿ ಮಾಡಿದೆ. ತೀವ್ರ ನೀರಿನ ಕೊರತೆ ನಡುವೆ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವ ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸಲು ಆರಂಭಿಸಿದ್ದಾರೆ.
ದ್ರಾಕ್ಷಿ ಕಾಯಿ ಮೇಲಿನ ನೀರಿನ ಅಂಶವನ್ನು ಕೀಟಗಳು ಸಂಪೂರ್ಣವಾಗಿ ಹೀರಿಕೊಳ್ಳುವುದರಿಂದ ಬೆಳೆ ಹಾಳಾಗುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ರೈತ ಮುಖಂಡ ಮುನಿರಾಜು ಮಾತನಾಡಿ, ಔಷಧ ಸಿಂಡಪಣೆ ಮಾಡಿದರೂ ಹುಳುಗಳು ನಿಯಂತ್ರಣಕ್ಕೆ ಬರುತ್ತಿಲ್ಲ.ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದರೂ ಯಾವುದೇ ಲಾಭ ಇಲ್ಲವಾಗಿದೆ ಎಂದು ರೈತರು ಅಳಲುತೋಡಿಕೊಂಡರು.
ಏನಿದು ಥ್ರಿಪ್ಸ್: ಇದೊಂದು ರಸಹೀರುವ ಕೀಟ. ಎಲೆಗಳಿಂದ ರಸ ಹೀರಿ ಎಲೆ ಮುದುರುವಂತೆ ಮಾಡುತ್ತದೆ. ತೀವ್ರ ಹಾನಿಗೊಳಗಾದ ಬಳ್ಳಿಗಳಿಂದ ಎಲೆಗಳು ಹಳದಿಯಾಗಿ ಮುರುಟುತ್ತದೆ. ಇದರ ನಿಯಂತ್ರಣಕ್ಕೆ ನುವಾನ್, ಕ್ಲೋರೋಪೈರಿಪಾಸ್ ಅಥವಾ ಮಾನೋಕ್ಲೋರಿಪಾಸ್ ಸಿಂಪಡಣೆ ಮಾಡಬೇಕು. ಎರಡು ಲೀಟರ್ ನೀರಿಗೆ ಎರಡು ಎಂ.ಎಲ್ನಂತೆ ಒಂದೊಂದು ಸ್ಪ್ರೇ ಮಾಡಿದರೆ ನಿಯಂತ್ರಣ ಮಾಡಬಹುದು. ರೈತರು ದುಬಾರಿ ಬೆಲೆ ಔಷಧ ಸಿಂಪಡಣೆ ಮಾಡುವ ಅಗತ್ಯವಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.