ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಅಂತರರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಪ್ರವಸಿಗರ ವೀಕ್ಷಣೆಗಾಗಿ ಎಂಟು ಹುಲಿಗಳನ್ನು ಹುಲಿ ಸಫಾರಿಯಲ್ಲಿ ಬಿಡಲಾಗಿತ್ತು. ಆರು ತಿಂಗಳ ಹೆಣ್ಣು ಹುಲಿ ಮರಿಗೆ ಹುಲಿ ದಿನದ ಅಂಗವಾಗಿ ‘ಹಿಮ’ ಎಂದು ನಾಮಕರಣ ಮಾಡಲಾಯಿತು.
2018ರ ಏಷ್ಯನ್ ಗೇಮ್ಸ್ನಲ್ಲಿ ಅಥ್ಲೆಟಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಹಿಮದಾಸ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಹುಲಿಮರಿಗೆ ಹಿಮ ಎಂದು ನಾಮಕರಣ ಮಾಡಲಾಗಿದೆ. ಹುಲಿಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಿತ್ರ ಬಿಡಿಸುವ ಸ್ಪರ್ಧೆ, ಹುಲಿ ವೇಷಧಾರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಹಾಗೂ ಖಜಾನೆ 2 ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಸ್.ರವೀಂದ್ರನ್ ಅವರು ಹುಲಿ ದಿನಾಚರಣೆಯ ಅಂಗವಾಗಿ ಹುಲಿಗಳನ್ನು ಪ್ರವಾಸಿಗರ ವೀಕ್ಷಣೆಗೆ ಬಿಡುಗಡೆ ಮಾಡಿದರು.
ಬಿಳಿ ಹುಲಿ ಸಫಾರಿಯಲ್ಲಿ ನಾಲ್ಕು ಬಿಳಿ ಹುಲಿಗಳನ್ನು ಪ್ರವಾಸಿಗರ ವೀಕ್ಷಣೆಗೆ ಬಿಡಲಾಗಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಣಾಧಿಕಾರಿ ವನಶ್ರೀ ವಿಪಿನ್ಸಿಂಗ್, ಉಪನಿರ್ದೇಶಕ ಕುಶಾಲಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.