ADVERTISEMENT

ಮಗುವಿಗೆ ಸಕಾಲದಲ್ಲಿ ಸಿಗದ ಚಿಕಿತ್ಸೆ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 14:09 IST
Last Updated 21 ಡಿಸೆಂಬರ್ 2019, 14:09 IST

ದೇವನಹಳ್ಳಿ: ‘ಒಂದೂವರೆ ತಿಂಗಳ ಗಂಡು ಮಗುವಿಗೆ ಕೊಯಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದ ಪರಿಣಾಮ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಮಗುವಿನ ತಾಯಿ ಪವಿತ್ರ ದೂರಿದ್ದಾರೆ.

‘ವೈದ್ಯರ ಸಲಹೆಯಂತೆ ರೋಗ ನಿರೋಧಕ ಚುಚ್ಚುಮದ್ದು ಹಾಕಿಸಬೇಕು. ಆರೋಗ್ಯ ಸಹಾಯಕರು ಡಿ.12‌ರಂದು ಅದೇ ರೀತಿ ಎರಡು ಚುಚ್ಚುಮದ್ದು, ಒಂದು ಡ್ರಾಪ್ ಹಾಕಿದ್ದಾರೆ. ನಂತರ ಮಗುವಿನ ದೈಹಿಕ ಚಟುವಟಿಕೆ ಕ್ಷೀಣಿಸುತ್ತಾ ಬಂತು. ವೈದ್ಯರು ಬೆಂಗಳೂರಿನ ವಾಣಿವಿಲಾಸ ಮಕ್ಕಳ ಆಸ್ಪತ್ರೆಗೆ ದಾಖಲಿಸಲು ಶಿಫಾರಸು ಮಾಡಿದರು. ಡಿ.16ರಂದು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷೆ ನಡೆಸಿದ ವೈದ್ಯರು, ಔಷಧ ನೀಡಿರುವುದು ಕ್ರಮಬದ್ದವಾಗಿಲ್ಲ. ಮಗು ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ. ಮೊದಲು ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆಯೋ ಅಲ್ಲೇ ತೆರಳುವಂತೆ ಸೂಚಿಸಿದರು’ ಎಂದು ಪವಿತ್ರಾ ಕಣ್ಣೀರಿಟ್ಟರು.

ಮತ್ತೆ ಕೊಯಿರಾ ಆಸ್ಪತ್ರೆಗೆ ಡಿ.19ರಂದು ತರಲಾಯಿತು. ವೈದ್ಯರು ಚಿಕಿತ್ಸೆ ನೀಡಲು ಮುಂದೆ ಬರಲಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದಾಗ, ಅವರ ಸೂಚನೆ ಮೇರೆಗೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಚಿಕಿತ್ಸೆ ಪಡೆದ ದಾಖಲೆಗಳನ್ನು ಅಲ್ಲಿನ ವೈದ್ಯರು ಕೇಳುತ್ತಿದ್ದಾರೆ. ಇದರ ನಡುವೆ ಮಗುವಿನ ಸ್ಥಿತಿ ದಿನೇ ದಿನೇ ಬಿಗಾಡಾಯಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸ್ಥಳೀಯರಾದ ಚಿಕ್ಕೇಗೌಡ ಮಾತನಾಡಿ, ವೈದ್ಯರು ಸಕಾಲದಲ್ಲಿ ಮಗುವಿಗೆ ಚಿಕಿತ್ಸೆ ನೀಡಿಲ್ಲ. ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಮಂಜುಳಾದೇವಿ ಪ್ರತಿಕ್ರಿಯಿಸಿ, ಸೂಕ್ತ ಚಿಕಿತ್ಸೆಗಾಗಿ ಎಲ್ಲ ರೀತಿ ವ್ಯವಸ್ಥೆ ಮಾಡಲಾಗಿದೆ. ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.