ADVERTISEMENT

ಆನೇಕಲ್: ಬಯಲು ಬಹಿರ್ದೆಸೆ, ಹೂಮಾಲೆ ಸ್ವಾಗತ!

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 2:13 IST
Last Updated 8 ಅಕ್ಟೋಬರ್ 2020, 2:13 IST
ಆನೇಕಲ್ ತಾಲ್ಲೂಕಿನ ಅಣ್ಣಯ್ಯನದೊಡ್ಡಿಯಲ್ಲಿ ಬಯಲು ಬಹಿರ್ದೆಸೆಗೆ ತೆರಳಿದ್ದವರಿಗೆ ತಾ.ಪಂ ಮತ್ತು ಗ್ರಾ.ಪಂ ಅಧಿಕಾರಿಗಳು ಹೂಮಾಲೆ ಹಾಕಿ ಸ್ವಾಗತಿಸಿದರು. ಬಯಲು ಬಹಿರ್ದೆಸೆ ಬಿಡುವಂತೆ ಮನವಿ ಮಾಡಿದರು.
ಆನೇಕಲ್ ತಾಲ್ಲೂಕಿನ ಅಣ್ಣಯ್ಯನದೊಡ್ಡಿಯಲ್ಲಿ ಬಯಲು ಬಹಿರ್ದೆಸೆಗೆ ತೆರಳಿದ್ದವರಿಗೆ ತಾ.ಪಂ ಮತ್ತು ಗ್ರಾ.ಪಂ ಅಧಿಕಾರಿಗಳು ಹೂಮಾಲೆ ಹಾಕಿ ಸ್ವಾಗತಿಸಿದರು. ಬಯಲು ಬಹಿರ್ದೆಸೆ ಬಿಡುವಂತೆ ಮನವಿ ಮಾಡಿದರು.   

ಆನೇಕಲ್:ಅಣ್ಣಯ್ಯನದೊಡ್ಡಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆಬಯಲು ಬಹಿರ್ದೆಸೆಗೆ ಹೋದವರಿಗೆ ಹೂಮಾಲೆ ಹಾಕಿ ಸ್ವಾಗತಿಸಿದ ವಿಚಿತ್ರ ಪ್ರಸಂಗ ನಡೆಯಿತು.

ರಾಗಿಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಶಿವನಹಳ್ಳಿ ರಾಮಕೃಷ್ಣಾಶ್ರಮವು ಗ್ರಾಮದಲ್ಲಿರುವ ನೂರು ಕುಟುಂಬಗಳಿಗೂ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿವೆ. ಆದರೆ, ಗ್ರಾಮದ ಜನರು ಈ ಶೌಚಾಲಯಗಳನ್ನು ಬಳಸುತ್ತಿಲ್ಲ.

ಈ ಬಗ್ಗೆ ಮಾಹಿತಿ ಪಡೆದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ದೇವರಾಜೇಗೌಡ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಮ್ಮ ಬುಧವಾರ ಬೆಳಿಗ್ಗೆ 6ರ ವೇಳೆಗೆ ಅಣ್ಣಯ್ಯನದೊಡ್ಡಿಯಲ್ಲಿ ಹಾಜರಾದರು.

ADVERTISEMENT

ಗ್ರಾಮಸ್ಥರು ಕೆರೆ, ಬೇಲಿ, ಹೊಲಗಳ ಕಡೆಗೆ ಬಹಿರ್ದೆಸೆಗೆ ಹೋಗಿ ಬರುತ್ತಿರುವ ದೃಶ್ಯಗಳನ್ನು ಕಣ್ಣಾರೆ ಕಂಡರು. ಕೆರೆ ಕಡೆಗೆ ಹೋಗಿ ಬರುತ್ತಿದ್ದವರನ್ನು ತಡೆದು ಹೂಮಾಲೆ ಹಾಕಿದರು. ಗ್ರಾಮಸ್ಥರು ಕಕ್ಕಾಬಿಕ್ಕಿಯಾದಾಗ, ಇನ್ನು ಮುಂದೆ ಮನೆಗಳಲ್ಲಿರುವ ಶೌಚಾಲಯಗಳನ್ನೇ ಬಳಸುವಂತೆ ಮನವಿ ಮಾಡಿದರು.

ಮನೆಯಲ್ಲಿ ಶೌಚಾಲಯವಿದ್ದರೂ ಮೊದಲಿನಿಂದಲೂ ರೂಢಿಸಿಕೊಂಡು ಬಂದಿರುವ ಬಯಲಿಗೆ ಹೋಗುವುದನ್ನು ಬಿಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದರು. ನಾಳೆಯಿಂದಲೇ ಶೌಚಾಲಯಗಳನ್ನು ಬಳಸುವುದಾಗಿ ಭರವಸೆ ನೀಡಿದರು.

ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲುಸರ್ಕಾರ ಮನೆ ಮನೆಗಳಿಗೂ ಶೌಚಾಲಯ ನಿರ್ಮಿಸಿಕೊಡಲು ಅನುದಾನ ಮಂಜೂರು ಮಾಡಿದೆ.ಆನೇಕಲ್‌ ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯಿತಿಗಳಿದ್ದು, ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದುಸರ್ಕಾರ ಘೋಷಣೆ ಮಾಡಿದೆ.

ಶೌಚಾಲಯಗಳಿದ್ದರೂ, ಗ್ರಾಮಸ್ಥರು ಮಾತ್ರ ಅವುಗಳ ಬಳಕೆ ಮಾಡುತ್ತಿಲ್ಲ.ಆನೇಕಲ್‌ ತಾಲ್ಲೂಕಿನ ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣಯ್ಯನದೊಡ್ಡಿ ಸೇರಿದಂತೆಹಲವು ಗ್ರಾಮಗಳಲ್ಲಿಇಂದಿಗೂ ಬಯಲು ಬಹಿರ್ದಸೆ ಪದ್ಧತಿ ರೂಢಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.