ಆನೇಕಲ್ : ತಾಲ್ಲೂಕಿನ ಮಾಸ್ತೇನಹಳ್ಳಿ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಏ.9ರಂದು ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಡಿ.ಆರ್.ಜಯರಾಜ್ ತಿಳಿಸಿದ್ದಾರೆ.
ಮಹಾರಥೋತ್ಸವದ ಅಂಗವಾಗಿ ಸೋಮವಾರ ಸ್ವಾಮಿಗೆ ರಾಜೋಪಾಚಾರ, ತ್ರಿಮುಖ ಗಣಪತಿ, ಅನ್ನಪೂರ್ಣೇಶ್ವರಿ ಹಾಗೂ ಕಾಶೀ ವಿಶ್ವೇಶ್ವರ ಸ್ವಾಮಿಗೆ ರುದ್ರಾಭಿಷೇಕ, ವೀರಗಾಸೆ, ವೃಷಭ ವಾಹನೋತ್ಸವ, ಕರಡಿ ವಾಧ್ಯ ಹಾಗೂ ಅಗ್ನಿಕೊಂಡ ನಡೆಯಲಿದೆ. ಏ.9ರಂದು ಮಹಾ ರಥೋತ್ಸವ ನಡೆಯಲಿದೆ. ರಾಜಾಪುರ ಶ್ರೀಗಳು, ಕನಕಪುರ ಮರಳೇಗವಿ ಮಠದ ಶ್ರೀಗಳು, ಗುಮ್ಮಳಾಪುರ, ಬೆಳ್ಳಾವಿ, ನಾಗಲಾಪುರ ಹಾಗೂ ಚಿಕ್ಕಕಲ್ಲುಬಾಳು ಶ್ರೀಗಳ ಸಾನಿಧ್ಯದಲ್ಲಿ ರಥೋತ್ಸವ ನಡೆಯಲಿದೆ. ರಥೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ಧರ್ಮರಾಯಸ್ವಾಮಿ ಕರಗ ಮಹೋತ್ಸವ ನಡೆಯಲಿದೆ. ಗ್ರಾಮದ 27ಗ್ರಾಮ ದೇವತೆಗಳ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಆನೇಕಲ್ ತಾಲ್ಲೂಕಿನ ಪ್ರಮುಖ ಶೈವ ಕ್ಷೇತ್ರಗಳಲ್ಲಿ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯವು ಪ್ರಮುಖವಾಗಿದ್ದು ತಾಲ್ಲೂಕಿನಲ್ಲಿ ನಿತ್ಯ ದಾಸೋಹ ನಡೆಯುತ್ತಿರುವ ಏಕೈಕ ಕೇಂದ್ರವಾಗಿದೆ. ಭಕ್ತರ ಸಹಕಾರದಿಂದ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರತಿ ಅಮಾವಾಸ್ಯೆಗೆ ದೇವಾಲಯದಲ್ಲಿ ಧರ್ಮ ಜಾಗೃತಿ ಸಮಾವೇಶ ಹಾಗೂ ಇಷ್ಟಲಿಂಗ ಶಿವಪೂಜೆ ಕಾರ್ಯಗಳು ನಡೆಯುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.