ಆನೇಕಲ್: ತಾಲ್ಲೂಕಿನ ಮುಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಗುಡಿಗಟ್ಟನಹಳ್ಳಿ ಮತ್ತು ಮಟ್ಟನಹಳ್ಳಿ ಗ್ರಾಮಗಳಲ್ಲಿ ಅನಧಿಕೃತವಾಗಿ ಬಟ್ಟೆಗೆ ಬಣ್ಣ ಹಾಕುವ ಘಟಕ ಸ್ಥಾಪಿಸಿ ತ್ಯಾಜ್ಯ ನೀರು ರಾಜಕಾಲುವೆಗಳ ಮೂಲಕ ದಕ್ಷಿಣ ಪಿನಾಕಿನಿ ನದಿ ಮತ್ತು ಕೆರೆಗಳಿಗೆ ಬಿಡಲಾಗುತ್ತಿದ್ದ ಹಿನ್ನೆಲೆಯಲ್ಲಿ ಕಂದಾಯ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಘಟಕ ತೆರವುಗೊಳಿಸಿದ್ದಾರೆ.
ತಹಶೀಲ್ದಾರ್ ಸಿ.ಮಹಾದೇವಯ್ಯ ಮಾತನಾಡಿ, ಮಟ್ಟನಹಳ್ಳಿ ಗ್ರಾಮದ ಸರ್ವೆ ನಂ.90ರಲ್ಲಿ ತಮಿಳುನಾಡು ಮೂಲದ ಲಕ್ಷ್ಮಣ್ಣಪ್ಪ ಮತ್ತು ಗುಡಿಗಟ್ಟನಹಳ್ಳಿ ಗ್ರಾಮದ ಸರ್ವೆ 123 ಮತ್ತು 124ರಲ್ಲಿ ಬಟ್ಟೆಗೆ ಬಣ್ಣ ಹಾಕುವ ಘಟಕ ಸ್ಥಾಪಿಸಿ ಘಟಕಗಳಿಂದ ತ್ಯಾಜ್ಯ ನೀರು ಸಂಸ್ಕರಿಸದೆ ನೇರವಾಗಿ ಕೆರೆ ಮತ್ತು ನದಿ ಮೂಲಗಳಿಗೆ ಹರಿಸುತ್ತಿರುವುದರಿಂದ ಅಂತರ್ಜಲ ಕಲುಷಿತವಾಗಿದೆ ಮತ್ತು ಪ್ರಾಣಿ ಪಕ್ಷಿಗಳು ನೀರು ಕುಡಿದು ಸಾವನ್ನಪ್ಪಿರುವ ಘಟನೆ ನಡೆದಿವೆ ಎಂದು ಸ್ಥಳೀಯರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪರಿಶೀಲಿಸಿ ಘಟಕ ಸಂಪೂರ್ಣ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪರಿಸರಕ್ಕೆ ಹಾನಿಯುಂಟು ಮಾಡುವ ಇಂತಹ ಘಟಕಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.