ದೇವನಹಳ್ಳಿ: ವಾಲ್ಮೀಕಿ ಸಮುದಾಯ ಪರಂಪರೆಯಿಂದ ದೇಶಕ್ಕೆ, ಸಮಾಜಕ್ಕೆ ನೀಡಿರುವ ಕೊಡುಗೆ ಬಗ್ಗೆ ಹೆಮ್ಮೆ ಪಡಬೇಕು ಎಂದು ವಾಲ್ಮೀಕಿ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಡೇರಿ ನಾಗೇಶ್ ಬಾಬು ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜ ವೀರ ಮದಕರಿ ನಾಯಕರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಹಿಂದೂಗಳ ಮಹಾ ಗ್ರಂಥಗಳಲ್ಲಿ ಒಂದಾದ ರಾಮಾಯಣ ರಚಿಸಿದ ವಾಲ್ಮೀಕಿ ವಿಶ್ವದಲ್ಲಿ ರಾಮನ ಜೀವನ ವೃತ್ತಾಂತವನ್ನು ತಿಳಿಯಲು ಕಾರಣರಾಗಿದ್ದಾರೆ. ವಾಲ್ಮೀಕಿಯ ಮೂಲ ರಾಮಾಯಣದಿಂದ ಪ್ರೇರಿತಗೊಂಡು ರಚಿಸಿದ ರಾಮಾಯಣ ಗ್ರಂಥಗಳು ಲೆಕ್ಕಕ್ಕೆ ಸಿಗದಷ್ಟು ರಚನೆಗೊಂಡಿವೆ ಎಂದರು.
ಮುಖಂಡ ಮಂಜುನಾಥ್ ಮಾತನಾಡಿ, ಸಮುದಾಯದಲ್ಲಿ ಒಗ್ಗಟ್ಟು ಮುಖ್ಯ. ಅನೇಕ ವರ್ಷಗಳಿಂದ ವಾರ್ಷಿಕ ವೀರ ಮದಕರಿ ನಾಯಕ ಜಯಂತಿ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಪರಿಸ್ಥಿತಿ ಬದಲಾಗಿದೆ; ಜಯಂತಿ ಸಮುದಾಯದ ಒಗ್ಗಟ್ಟಿನ ಸಂಕೇತವಾಗಿದೆ ಎಂದರು.
ಪಕ್ಷಭೇದ ಮರೆತು ಸಮುದಾಯ ಬಲಿಷ್ಠವಾಗಬೇಕು. ಈ ಹಿಂದಿನ ಕತೆ ಇಲ್ಲಿ ಅಪ್ರಸ್ತುತ ಎಂದು ಹೇಳಿದರು.
ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಯರ್ತಿಗಾನಹಳ್ಳಿ ಶ್ಯಾಮಣ್ಣ ಮಾತನಾಡಿ, ದಾವಣಗೆರೆ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಿಂದ ಕಾಲ್ನಡಿಗೆಯಲ್ಲಿ ಜಾಥಾ ಬಂದು ಸರ್ಕಾರ ಪರಿಶಿಷ್ಟ ಪಂಗಡಕ್ಕೆ ನೀಡಿರುವ ಶೇ 3 ರಷ್ಟು ಮೀಸಲಾತಿಯಿಂದ ಶೇ 5ಕ್ಕೆ ಹೆಚ್ಚಿಸಬೇಕೆಂದು ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಮಾವೇಶ ನಡೆಸಿ ಒತ್ತಾಯಿಸಲಾಗಿತ್ತು ಎಂದು ಹೇಳಿದರು.
‘ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ನಮ್ಮ ಬೇಡಿಕೆ ತಾತ್ಕಾಲಿಕ ಸ್ಥಗಿತವಾಗಿದೆ. ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಗುರುಪೀಠದ ಪ್ರಸನ್ನಾನಂದ ಸ್ವಾಮಿ ಹೇಳಿದ್ದಾರೆ’ ಎಂದರು.
ಮುಖಂಡ ಗುರಪ್ಪ ಮಾತನಾಡಿದರು. ವಾಲ್ಮೀಕಿ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಮುನಿರಾಜು, ಪುರಸಭೆ ಸದಸ್ಯ ಮುನಿಕೃಷ್ಣ, ಮುಖಂಡರಾದ ರಾಮಣ್ಣ, ಪಿಳ್ಳಮುನಿಯಪ್ಪ, ನಾರಾಯಣಸ್ವಾಮಿ, ಮುನಿಯಪ್ಪ, ಯರ್ತಿಗಾನಹಳ್ಳಿ ಮುನಿರಾಜು, ಚಿಕ್ಕಸಣ್ಣೆ ಮುನಿರಾಜು, ವೀರಭದ್ರಪ್ಪ, ಉಮೇಶ್, ರವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.