ಆನೇಕಲ್: ತಾಲ್ಲೂಕಿನ ಚಂದಾಪುರ-ದೊಮ್ಮಸಂದ್ರ ರಸ್ತೆಯ ಗೋಪಸಂದ್ರ ಗೇಟ್ ಬಳಿಯ ವೀರ ಆಂಜನೇಯಸ್ವಾಮಿ ರಥೋತ್ಸವವು ಶನಿವಾರ ವಿಜೃಂಭಣೆಯಿಂದ ನಡೆಯಿತು. ನೂರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.
ರಥೋತ್ಸವದ ಅಂಗವಾಗಿ ನವಗ್ರಹ ಪೂಜೆ, ಗಣಹೋಮ, ರಕ್ಷರಾಮ ತಾರಕ ಹೋಮ, ಆಂಜನೇಯ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ಬೆಳಿಗ್ಗೆ 11ರ ವೇಳೆಗೆ ಅಲಂಕೃತ ರಥದಲ್ಲಿ ವೀರ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನೆರೆದಿದ್ದ ಭಕ್ತರು ಜೈ ಶ್ರೀರಾಮ್ ಜೈ ಆಂಜನೇಯ ಘೋಷಣೆಗಳನ್ನು ಕೂಗಿ, ದವನ ಚುಚ್ಚಿದ ಬಾಳೆಹಣ್ಣನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಅಲಂಕೃತ
ರಥವು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ವೀರಗಾಸೆ, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು. ನೂರಾರು ಮಂದಿ ಮಹಿಳೆಯರು ಮಂಗಲ ಕಲಶಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಎತ್ತುಗಳ ಮೆರವಣಿಗೆ ನಡೆಯಿತು.
ಶನಿವಾರ ಸಂಜೆ ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ, ಕೋಲಾಟ ಪ್ರದರ್ಶನ ಮತ್ತು ವಿವೇಕಾನಂದ ಯೋಗ ಆಶ್ರಮದ ವತಿಯಿಂದ ಯೋಗ ಪ್ರದರ್ಶನ ಆಯೋಜಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.