ದೇವನಹಳ್ಳಿ:ಪಟ್ಟಣದ ಬಜಾರ್ ರಸ್ತೆಯ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿ ದೇವಾಲಯದಲ್ಲಿ ವೀರಭದ್ರಸ್ವಾಮಿ ಜಯಂತ್ಯುತ್ಸವದ ಅಂಗವಾಗಿ ಬುಧವಾರ ವಿವಿಧ ಪೂಜೆ ಹಾಗೂ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಪಂಚಾಮೃತ ಅಭಿಷೇಕ ಹಾಗೂ ಬೆಳ್ಳಿಯ ಕವಚದ ಅಲಂಕಾರ ಗಮನ ಸೆಳೆಯಿತು.
ಪುರಸಭಾ ಸದಸ್ಯ ವೈ.ಆರ್. ರುದ್ರೇಶ್ ಮಾತನಾಡಿ, ಜಯಂತ್ಯುತ್ಸವದ ಮೂಲಕ ವೀರಭದ್ರಸ್ವಾಮಿ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಧಾರ್ಮಿಕ ಕಾರ್ಯಗಳು ಹೆಚ್ಚಾದಾಗ ಶಾಂತಿ, ನೆಮ್ಮದಿ ಹೆಚ್ಚುತ್ತದೆ ಎಂದು ಹೇಳಿದರು.
ಸಮಾಜದ ಮುಖಂಡ ಗುರಪ್ಪ ಮಾತನಾಡಿ, ‘ಕೊರೊನಾ ಇರುವುದರಿಂದ ಸರಳವಾಗಿ ಆಚರಿಸಲಾಗುತ್ತಿದೆ. ಕೋವಿಡ್ ಸಂಕಷ್ಟದಲ್ಲಿ ಜಗತ್ತೇ ಮುಳುಗಿದೆ. ವೀರಭದ್ರಸ್ವಾಮಿಯು ಜಗತ್ತಿಗೆ ಅಂಟಿಕೊಂಡಿರುವ ಸಂಕಷ್ಟವನ್ನು ಪಾರು ಮಾಡಿ ಸಮಸ್ತ ಜನರಿಗೆ ಶೇಯಸ್ಸನ್ನು ಅನುಗ್ರಹಿಸಲಿ’ ಎಂದು ಆಶಿಸಿದರು.
ಅಯೋಧ್ಯಾ ನಗರ ಶಿವಾಚಾರ ವೈಶ್ಯ ನಗರ್ತರ ಸಂಘದ ಕಾರ್ಯದರ್ಶಿ ಸಿ. ನಟರಾಜ್, ಬೆಂಗಳೂರು ನಗರ್ತ ಸಂಘದ ನಿರ್ದೇಶಕ ಎ.ಸಿ. ಅನಿಲ್, ಮುಖಂಡರಾದ ಎ.ಸಿ. ಗುರುಸ್ವಾಮಿ, ಚಿಕ್ಕಬಸಪ್ಪ, ಮುರುಗನ್, ಬಸವರಾಜು, ಕೃಷ್ಣ, ಭಾಸ್ಕರ್, ವಿ. ರವಿಕುಮಾರ್, ಎಸ್. ಶಿವಕುಮಾರ್, ಸದಾನಂದ, ಎಸ್. ರಮೇಶ್ ಕುಮಾರ್, ಸುರೇಶ್, ಮೋಹನ್, ಅರ್ಚಕ ದಯಾನಂದ್ ಆರಾಧ್ಯ ಹಾಗೂ ಸಂಘದ ಪದಾಧಿಕಾರಿಗಳು
ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.