ವಿಜಯಪುರ(ದೇವನಹಳ್ಳಿ): ವರಮಹಾಲಕ್ಷ್ಮೀ ಹಬ್ಬ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಹೋಬಳಿ ಜನತೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹಬ್ಬಕ್ಕೆ ಅಗತ್ಯವಾಗಿ ಬೇಕಿರುವ ಬಾಳೆಹಣ್ಣು ಶತಕ ಬಾರಿಸಿದೆ.
ಒಂದು ಕೆ.ಜಿ ಬಾಳೆಹಣ್ಣಿನ ಬೆಲೆ ₹80ರಿಂದ 120ಕ್ಕೆ ಏರಿಕೆಯಾಗಿದೆ. ಹಬ್ಬಕ್ಕೆ ಎರಡು ದಿನಗಳು ಬಾಕಿಯಿರುವಾಗಲೇ ಮಾರುಕಟ್ಟೆಗೆ ಬಂದಿರುವ ಅಗತ್ಯ ವಸ್ತುಗಳ ಬೆಲೆಗಳು ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಾಗಿವೆ.
ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂ ಒಂದು ಕೆ.ಜಿ. ₹1ಸಾವಿರ, ಕನಕಾಂಬರ ₹2,800, ಚೆಂಡು ಹೂ ₹40, ಸೇವಂತಿ ₹280, ಬಳೆ ಒಂದು ಡಜನ್ ₹100, ದಾಳಿಂಬೆ ಕೆ.ಜಿಗೆ ₹150, ಮೂಸಂಬಿ ₹100, ಸೇಬು ₹200, ತಾವರೆಹೂ ಜೊತೆ ₹80,
ಮತ್ತೊಂದೆಡೆ ಮನೆಗಳಲ್ಲಿ ಕಶಸ ಇಡುವವರು, ಲಕ್ಷ್ಮಿಗೆ ಉಡಿಸಲು ಸೀರೆ ಕುಪ್ಪಸ, ಲಕ್ಷ್ಮಿ ಮುಖವಾಡ ಖರೀದಿಸುತ್ತಿದ್ದರು. ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ಹಣ್ಣುಗಳಾದ ಬೇಲದ ಹಣ್ಣು, ಬೆಂಗಳೂರು ನೀಲಿ ದ್ರಾಕ್ಷಿ, ಅನಾನಸ್, ಸೀತಾಫಲ, ಸೀಬೆ, ಸೇಬು, ಮೂಸಂಬಿ, ಕಿತ್ತಳೆ, ತೆಂಗಿನಕಾಯಿ ಹಾಗೂ ಬಾಳೆಹಣ್ಣು ಸೇರಿದಂತೆ ಇತ್ಯಾದಿ ಹಣ್ಣುಗಳನ್ನು ಖರೀದಿ ಮಾಡಲು ಮುಂದಾಗಿದ್ದರು.
ಸಿಹಿ ತಿಂಡಿ ಖರೀದಿ ಜೋರು: ಹಬ್ಬದ ಹಿನ್ನೆಲೆಯಲ್ಲಿ ಪೂಜೆಗಾಗಿ ಅಗತ್ಯವಾಗಿರುವ ಸಿಹಿ ತಿಂಡಿಗಳ ಮಾರಾಟವೂ ಜೋರಾಗಿ ನಡೆಯಿತು. ಗ್ರಾಹಕರು, ಹೆಚ್ಚಿನ ಪ್ರಮಾಣದಲ್ಲಿ ಸಿಹಿತಿಂಡಿಗಳು ಖರೀದಿ ಮಾಡುತ್ತಿದ್ದಾರೆ ಎಂದು ವ್ಯಾಪಾರಿ ಶಿವಕುಮಾರ್ ಹೇಳಿದರು.
‘ಈ ಬಾರಿ ಮಳೆಗಳು ಕಡಿಮೆಯಾಗಿರುವ ಕಾರಣ, ನಿರೀಕ್ಷಿತ ಪ್ರಮಾಣದಲ್ಲಿ ಹೂ ಮಾರುಕಟ್ಟೆಗೆ ಬಾರದ ಹಿನ್ನೆಲೆಯಲ್ಲಿ ಬೆಲೆಗಳು ಸಹಜವಾಗಿ ಏರಿಕೆಯಾಗಿವೆ. ನಾವು ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಿಂದ ಹೂ, ಹಣ್ಣು ಖರೀದಿ ಮಾಡಿಕೊಂಡು ಬಂದು, ಮಾರಾಟ ಮಾಡುತ್ತೇವೆ. ಅಲ್ಲೆ ನಮಗೆ ದುಬಾರಿ ಎನಿಸುತ್ತದೆ’ ವ್ಯಾಪಾರಿ ಅಸ್ಲಂ ತಿಳಿಸಿದರು.
Quote - ಕಳೆದ ವರ್ಷಕ್ಕಿಂತ ಈ ಬಾರಿ ಅಗತ್ಯ ವಸ್ತುಗಳು ದುಬಾರಿಯಾಗಿವೆ. ಸಂಪಾದನೆಗೂ ಈಗಿನ ಬೆಲೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಸುಶೀಲ ಗ್ರಾಹಕಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.