ADVERTISEMENT

ವಿಜಯಪುರ: ಶಾಲೆ ಕಾಂಪೌಂಡ್‌ ಪಕ್ಕದಲ್ಲಿರುವ ತಿಪ್ಪೆ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 14:42 IST
Last Updated 3 ಜೂನ್ 2023, 14:42 IST
ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಹಾಕಿರುವ ಕಸದ ತಿಪ್ಪೆಗಳು 
ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಹಾಕಿರುವ ಕಸದ ತಿಪ್ಪೆಗಳು    

ವಿಜಯಪುರ(ದೇವನಹಳ್ಳಿ): ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಕಸದ ತಿಪ್ಪೆಗಳಾಕಿದ್ದು, ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿದೆ. ಹಾಗಾಗಿ ಗ್ರಾಮಪಂಚಾಯಿತಿಯವರು ತಿಪ್ಪೆಗಳನ್ನು ತೆರವುಗೊಳಿಸಬೇಕೆಂದು ಪೋಷಕರು ಹಾಗೂ ಶಾಲೆಯ ಸಿಬ್ಬಂದಿ ಒತ್ತಾಯಿಸಿದ್ದಾರೆ.

ವಿಜಯಪುರ-ಚಿಕ್ಕಬಳ್ಳಾಪುರದ ಮುಖ್ಯರಸ್ತೆಯಲ್ಲಿರುವ ನಾರಾಯಣಪುರ ಪ್ರೌಢಶಾಲೆಯಲ್ಲಿ ನೂರಾರು ಮಂದಿ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಶಾಲೆಯ ಆವರಣದಲ್ಲಿ ನೂತನವಾಗಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡಿ, ಕಾಂಪೌಂಡ್‌ಗೆ ಬಣ್ಣ ಬಳಿಯಲಾಗಿದೆ. ಆದರೂ ಕಸದ ತಿಪ್ಪೆಯನ್ನು ಕಾಂಪೌಂಡ್ ಪಕ್ಕದಲ್ಲಿ ಹಾಕಿದ್ದು, ಸಗಣಿ ದುರ್ವಾಸನೆ ಬೀರುತ್ತಿದೆ. ಜೊತೆಗೆ ಅನೇಕ ಹುಳುಗಳು ಶಾಲೆಯ ಕೊಠಡಿಗಳಿಗೆ ಹೋಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಹಾಗಾಗಿ ಗ್ರಾಮ ಪಂಚಾಯಿತಿಯವರು ಅಗತ್ಯ ಕ್ರಮ ಕೈಗೊಳ್ಳಿ ಎಂದು ಶಾಲಾ ಸಿಬ್ಬಂದಿ ಮನವಿ ಮಾಡಿದ್ದಾರೆ.

ಶಾಲಾಭಿವೃದ್ಧಿ ಸಮಿತಿಯ ಸದಸ್ಯೆಯೊಬ್ಬರು ಮಾತನಾಡಿ, ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬಡ ಮಕ್ಕಳು ಎಂದು ಗ್ರಾಮ ಪಂಚಾಯಿತಿಯವರು ಈ ಕಡೆ ಗಮನಹರಿಸುತ್ತಿಲ್ಲ. ಶೌಚಾಲಯಗಳನ್ನೂ ಸ್ವಚ್ಛಗೊಳಿಸುವುದಿಲ್ಲ. ಹಲವು ಬಾರಿ ಈ ಸಮಸ್ಯೆ ಬಗ್ಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಈ ಕುರಿತು ಪ್ರತಿಕ್ರಿಯೆ ಪಡೆಯಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.