ಆನೇಕಲ್: ಪಟ್ಟಣದ ಕಾಳಿಕ ಕಮಟೇಶ್ವರ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಮತ್ತು ಪಲ್ಲಕ್ಕಿ ಉತ್ಸವ ಬುಧವಾರ ನಡೆಯಿತು.
ವಿಶ್ವಕರ್ಮ ಜಯಂತಿಯ ಪ್ರಯುಕ್ತ ಕಾಳಿಕ ಕಮಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ದೇಗುಲಗಳಲ್ಲಿರುವ ಗಾಯತ್ರಿ ದೇವಿ, ವಿಶ್ವಕರ್ಮ ಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಅಲಂಕಾರ ಮಾಡಲಾಯಿತು.
ವಿಶ್ವಕರ್ಮರ ಉತ್ಸವ ಮೂರ್ತಿ, ಕಾಳಿಕ ಕಮಟೇಶ್ವರ, ಗಾಯತ್ರಿ ಸೇರಿದಂತೆ ನಾಲ್ಕು ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ವೀರಗಾಸೆ, ಚಂಡೆ, ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ವಿಶ್ವಕರ್ಮ ಸಮಿತಿ ಕೇಶವಮೂರ್ತಿ, ವಿಶ್ವಕರ್ಮ ಸಮುದಾಯವು ಪಂಚ ಕಸಬುಗಳ ಮೂಲಕ ಎಲ್ಲಾ ವರ್ಗಗಳಿಗೂ ಅವಶ್ಯ ವಸ್ತು ತಯಾರಿಸಿ ಸಮಾಜಕ್ಕೆ ಕೊಡುಗೆ ನೀಡುವ ಸಮಾಜವಾಗಿದೆ. ರೈತರು ಬಳಸುವ ಹಲವಾರು ಸಾಮಗ್ರಿ ತಯಾರಿಸಿಕೊಟ್ಟು ರೈತಸ್ನೇಹಿಯಾಗಿದ್ದಾರೆ. ಸಮಾಜದಲ್ಲಿ ಎಲ್ಲಾ ವರ್ಗಗಳೊಂದಿಗೆ ಸೌಹಾರ್ದತೆಯಿಂದ ನಡೆದುಕೊಳ್ಳುವ ವಿಶ್ವಕರ್ಮ ಸಮಾಜಕ್ಕೆ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ಶ್ರೀನಿವಾಸಾಚಾರ್, ವಿಶ್ವಕರ್ಮ ಸಮಾಜ ಕುಲಕಸುಬು ನಂಬಿ ಜೀವನ ಸಾಗಿಸುತ್ತಿದೆ. ಕಸುಬು ಸಮರ್ಪಕವಾಗಿ ನಿರ್ವಹಿಸಲು ಸಾಲ ಸೌಲಭ್ಯ, ತರಬೇತಿ ಕಾರ್ಯಕ್ರಮ ರೂಪಿಸಬೇಕು. ಪಟ್ಟಣದಲ್ಲಿ ವಿಶ್ವಕರ್ಮ ಸಮುದಾಯ ಭವನ ಸ್ಥಾಪಿಸಲು ಜಾಗ ಮೀಸಲಿಡಬೇಕು. ಇದರಿಂದ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಪ್ರತಿ ಕುಟುಂಬಗಳಲ್ಲಿಯೂ ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದು ಹೇಳಿದರು.
ಮುಖಂಡರಾದ ರವೀಂದ್ರಚಾರಿ, ಮಹದೇವಾಚಾರಿ, ಸುರೇಶಾಚಾರಿ, ರುದ್ರೇಶಾಚಾರಿ, ಕಂಬಿ ಮೂರ್ತಿ, ನಾಗರಾಜು, ಸಬ್ಮಂಗಲ ನಾಗರಾಜು, ನಂಜುಂಡಾಚಾರಿ, ವೆಂಕಟೇಶ್, ಮುನಿರಾಜು, ಮಲ್ಲೇಶಾಚಾರಿ, ಪಲ್ಲಕ್ಕಿ ನವೀನ್ ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.