ADVERTISEMENT

ನಗರಸಭೆ ವ್ಯಾಪ್ತಿಯಲ್ಲಿ ಡಿಸೆಂಬರ್ ನಿಂದ ವಾರ್ಡ್ ಸಭೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 19:45 IST
Last Updated 16 ನವೆಂಬರ್ 2018, 19:45 IST
ಸಾರ್ವಜನಿಕರಿಂದ ಕುಂದು-ಕೊರತೆಗಳನ್ನು ಶಾಸಕ ಟಿ.ವೆಂಕಟರಮಣಯ್ಯ ಆಲಿಸಿದರು
ಸಾರ್ವಜನಿಕರಿಂದ ಕುಂದು-ಕೊರತೆಗಳನ್ನು ಶಾಸಕ ಟಿ.ವೆಂಕಟರಮಣಯ್ಯ ಆಲಿಸಿದರು   

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯುಲ್ಲಿನ ಸಾರ್ವನಿಕರ ಕುಂದು-ಕೊರತೆ ಪ್ರತಿ ಶುಕ್ರವಾರ ನಗರಸಭೆ ಕಚೇರಿಯಲ್ಲಿಯೇ ಬಗೆಹರಿಸಲಾಗುತ್ತದೆ. ಡಿಸೆಂಬರ್‌ನಿಂದ ಪ್ರತಿ ವಾರ್ಡ್‌ನಲ್ಲೂ ಸಭೆ ನಡೆಸಲಾಗುವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.

ರೋಜಿಪುರದ ನಿವಾಸಿ ರಾಘವ ಮನವಿ ಮಾಡಿ, 27ನೇ ವಾರ್ಡ್‌ನಲ್ಲಿ2ಲಕ್ಷ ಅನುದಾನದಲ್ಲಿ ನಿರ್ಮಿಸುತ್ತಿದ್ದ ಚರಂಡಿ ಕಾಮಗಾರಿ ನಗರಸಭೆ ಅಧಿಕಾರಿಗಳು ಮೊಟಕುಗೊಳಿಸಿರುವುದರಿಂದ ಈ ವ್ಯಾಪ್ತಿಯ ಜನರಿಗೆ ತೊಂದರೆ ಉಂಟಾಗಿದೆ. ಸೊಳ್ಳೆಗಳ ಹಾವಳಿ ಮಿತಿಮೀರಿದೆ. ಅಲ್ಲದೆ, ಎಚ್1ಎನ್1 ಹಾವಳಿ ಹೆಚ್ಚಾಗಿರುವುದರಿಂದ ಈ ವ್ಯಾಪ್ತಿಯ ಜನರು ಆತಂಕದಲ್ಲಿದ್ದು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಗಂಗಾಧರಪುರದ ನಿವಾಸಿ ಕಾಂತಮ್ಮ ಮಾತನಾಡಿ, ವಾಜಪೇಯಿ ಆಶ್ರಯ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ. ಮನೆ ಕೆಲಸ ಆರಂಭಿಸಿ ಒಂದು ವರ್ಷ ಕಳೆದರೂ ನಗರಸಭೆ ಅಧಿಕಾರಿಗಳು ಪರಿಶೀಲಿಸಿಲ್ಲ. ಅಲ್ಲದೆ, ಮನೆಯ ದಾಖಲೆ ಪಡೆಯಲು ಇಲ್ಲಿನ ಸಿಬ್ಬಂದಿ ₹5 ಸಾವಿರ ಪಡೆದಿದ್ದು, ಇದುವರೆಗೂ ಯೋಜನೆ ಹಣ ಕೈಸೇರಿಲ್ಲ ಎಂದರು.

ADVERTISEMENT

ರಾಜೀವ್ ಗಾಂಧಿ ಬಡಾವಣೆ ನಿವಾಸಿ ರತ್ನಮ್ಮ ಎಂಬುವವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಕುಟುಂಬಕ್ಕೆ ಸೂಕ್ತ ಆಶ್ರಯ ಮನೆ ನೀಡಬೇಕೆಂದು ಮನವಿ ಮಾಡಿದರು.

ರಾಜೀವ್‌ಗಾಂಧಿ ಬಡವಾಣೆಯಲ್ಲಿ 15ವರ್ಷಗಳಿಂದ 40ಕ್ಕೂ ಹೆಚ್ಚು ಕುಟುಂಬ ದಾಖಲೆ ಇಲ್ಲದೆ ವಾಸಿಸುತ್ತಿದ್ದು ಒಕ್ಕಲೆಬ್ಬಿಸುವ ಕಾರ್ಯ ನಡೆದಿದೆ. ಇದರಿಂದ ಜನರು ನಿರಾಶ್ರಿತರಾಗುತ್ತಿದ್ದು ಅವರಿಗೆ ನಗರಸಭೆ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯ ಕಲ್ಪಿಸುವಂತೆ ಮುಖಂಡರಾದ ಸಿದ್ದರಾಜು, ಬೇಕರಿ ಸತೀಶ್ ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್, ಪೌರಾಯುಕ್ತ ಆರ್.ಮಂಜುನಾಥ್, ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.