ದೊಡ್ಡಬಳ್ಳಾಪುರ: ಹೂ ಹಣ್ಣು, ಬಾಳೆಕಂದು, ಬೂದುಕುಂಬಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ದುಬಾರಿಯಾಗಿದ್ದು, ಆಯುಧ ಪೂಜೆ, ವಿಜಯದಶಮಿ ಹಬ್ಬಕ್ಕೆ ತಾಲ್ಲೂಕಿನಲ್ಲಿ ಸ್ವಾಗತ ನಡೆದಿದೆ.
ನಗರದ ಮಾರುಕಟ್ಟೆ ಪ್ರದೇಶದಲ್ಲಿ ನೂರಾರು ಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ. ಆದರೆ ಹೂವು ಬೂದು ಕುಂಬಳದ ಬೆಲೆಗಳು ಗಗನಕ್ಕೇರಿವೆ. ಕಾಕಡ, ಮಳ್ಳೆ ಹೂವಿನ ಬೆಲೆ ಕೆ.ಜಿಗೆ ₹500 ರಿಂದ ₹600 ವರೆಗಿದ್ದರೆ ಕನಕಾಂಬರ ₹1,400 ಸೇವಂತಿಗೆ, ಬಟನ್ಸ್ ಮೊದಲಾದ ಹೂವಿನ ಬೆಲೆಗಳು ಕೆ.ಜಿಗೆ ₹200 ರವರೆಗೂ ಇವೆ. ಇನ್ನು ದಾಳಿಂಬೆ ₹150 ದಾಟಿದ್ದು, ಮಿಕ್ಕ ಹಣ್ಣುಗಳ ಬೆಲೆಗಳೂ ಕೆಜಿಗೆ ₹20 ರಿಂದ ₹30 ಹೆಚ್ಚಾಗಿವೆ. ಬಾಳೆಕಂದುಗಳ ಬೆಲೆ ಸಹ ಹೆಚ್ಚಾಗಿದ್ದು, ಬೂದು ಕುಂಬಳಕಾಯಿ ಕೆಜಿಗೆ ₹20ರಿಂದ ₹25 ಇದೆ. ಆಯುಧ ಪೂಜೆಗೆ ಯಂತ್ರಗಳು, ವಾಹನಗಳು ಮೊದಲಾದವುಗಳನ್ನು ಶುಚಿಗೊಳಿಸಿ ಮಾಡಿ ಪೂಜೆಗೆ ಅಣಿ ಮಾಡಿಕೊಳ್ಳುತ್ತಿದ್ದುದು ಕಂಡುಬಂತು.
ಒಂದು ವಾರದಿಂದ ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಹೂವುಗಳ ಮೇಲೆ ತೇವಾಂಶ ಹೆಚ್ಚಾಗಿ ಸಹಜವಾಗಿ ಬೆಲೆಗಳು ಹೆಚ್ಚಾಗಿವೆ. ನೇಕಾರಿಕೆ ಕುಸಿದಿದ್ದು, ಕೃಷಿ ಚಟುವಟಿಕೆಗಳು ಚೇತರಿಸಿಕೊಳ್ಳಬೇಕಿದೆ. ಈ ನಡುವೆ ಎಲ್ಲದಕ್ಕೂ ಬೆಲೆ ದುಬಾರಿಯಾಗಿವೆ. ಬೆಲೆ ಏರಿಕೆ ನೋಡಿದರೆ ಹಬ್ಬ ಮಾಡಲು ಅಂತಹ ಉತ್ಸಾಹವೇ ಇಲ್ಲದಿದ್ದರೂ ವರ್ಷಕ್ಕೊಮ್ಮೆ ಹಿಂದಿನಿಂದಲೂ ಆಚರಿಸುತ್ತಿರುವ ಹಬ್ಬಗಳನ್ನು ಆಚರಿಸಲೇಬೇಕಲ್ಲ ಎನ್ನುತ್ತಾರೆ ಬಹುಪಾಲು ಸಾರ್ವಜನಿಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.