ಆನೇಕಲ್: ವಿದ್ಯಾರ್ಥಿಗಳು ಬ್ಯಾಂಕಿಂಗ್ ಚಟುವಟಿಕೆ ಬಗ್ಗೆ ಮಾಹಿತಿ ಹೊಂದಿರಬೇಕು. ಪ್ರತಿ ವಿದ್ಯಾರ್ಥಿಯೂ ಬ್ಯಾಂಕ್ ಖಾತೆ ತೆರೆಯುವ ಮೂಲಕ ಉಳಿತಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನಾಗನಾಥಪುರಂ ಬಾಷ್ ಕಂಪನಿ ವ್ಯವಸ್ಥಾಪಕ ಜೀನಚಂದ್ರ ತಿಳಿಸಿದರು.
ಅವರು ತಾಲ್ಲೂಕಿನ ಹುಸ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಷ್ ಪ್ರತಿಷ್ಠಾನ ಮತ್ತು ಕಾರ್ಪೋರೇಷನ್ ಬ್ಯಾಂಕ್ ವತಿಯಿಂದ ನಡೆದ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ಯಾಂಕ್ ಖಾತೆ ಇಲ್ಲದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಖಾತೆ ತೆರೆಯಲು ಸಂಸ್ಥೆ ನೆರವಾಗಲಿದೆ. ಪ್ರತಿಯೊಬ್ಬರು ಖಾತೆ ಹೊಂದಿದ್ದರೆ ಸರ್ಕಾರದ ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲ ಸೌಲಭ್ಯಗಳು ಬ್ಯಾಂಕ್ ಮೂಲಕ ದೊರೆಯುವಂತೆ ಮಾಡಬಹುದು. ವಿದ್ಯಾರ್ಥಿಗಳು ಉಳಿತಾಯ ಮಾಡಬಹುದು ಎಂದರು.
ಮುಖ್ಯಶಿಕ್ಷಕ ಆರ್.ಶ್ರೀನಿವಾಸಮೂರ್ತಿ ಮಾತನಾಡಿ, ಬಾಷ್ ಪ್ರತಿಷ್ಠಾನ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಹೆಚ್ಚಿನ ನೆರವು ನೀಡುತ್ತಿದೆ. ₹1ಕೋಟಿ ವೆಚ್ಚದಲ್ಲಿ ಹುಸ್ಕೂರು ಸರ್ಕಾರಿ ಶಾಲೆ ನವೀಕರಣ ಮಾಡಿ ಎಲ್ಲ ಸೌಲಭ್ಯ ಕಲ್ಪಿಸಿಕೊಟ್ಟಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಬ್ಯಾಂಕ್ ಖಾತೆ ಹೊಂದಿದ್ದರೆ ಸೌಲಭ್ಯ ಮಧ್ಯವರ್ತಿಗಳಿಲ್ಲದೇ ನೇರವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಬಾಷ್ ಪ್ರತಿಷ್ಠಾನದ ಕಾರ್ಯಕ್ರಮಾಧಿಕಾರಿ ಶ್ರೀನಿವಾಸರಾವ್, ಕಾರ್ಪೋರೇಷನ್ ಬ್ಯಾಂಕ್ನ ಮುತ್ತಾನಲ್ಲೂರು ಶಾಖೆಯ ಮ್ಯಾನೇಜರ್ ಚಂದ್ರಶೇಖರ್, ಮುಖಂಡ ಯಲ್ಲಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.