ADVERTISEMENT

ಬೆಂ.ಗ್ರಾಮಾಂತರ: ಅನುಮಾನಾಸ್ಪದವಾಗಿ ಮಹಿಳೆ ಸಾವು

ಕೊಲೆ ಶಂಕೆ ಮೇಲೆ ಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 6:24 IST
Last Updated 4 ನವೆಂಬರ್ 2022, 6:24 IST
ಉಮಾದೇವಿ
ಉಮಾದೇವಿ   

ವಿಜಯಪುರ(ಬೆಂ.ಗ್ರಾಮಾಂತರ): ಪಟ್ಟಣದ 3ನೇ ವಾರ್ಡ್‌ನ ಭರತ್ ನಗರದ ಮನೆಯೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ.

ಅನುಮಾಸ್ಪದವಾಗಿ ಮೃತಪಟ್ಟಿರುವ ಮಹಿಳೆಯನ್ನು ಉಮಾದೇವಿ(37) ಎಂದು ಗುರುತಿಸಲಾಗಿದೆ. ಗಂಡನೇ ಆಕೆಯನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ಮೇರೆಗೆ ಆಕೆಯ ಗಂಡ ನರಸಿಂಹಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೊದಲ ಗಂಡನಿಂದ ದೂರವಾಗಿದ್ದ ಉಮಾದೇವಿ ಅವರು ಆರೋಪಿ ನರಸಿಂಹ ಮೂರ್ತಿಯನ್ನು 2ನೇ ಮದುವೆಯಾಗಿದ್ದರು. ಮೃತಳ ತಾಯಿ ನೀಡಿದ ಮನೆಯಲ್ಲಿ ಗಂಡ ಮತ್ತು ಹೆಂಡತಿ ವಾಸವಿದ್ದರು ಎಂದು ತಿಳಿದುಬಂದಿದೆ.

ADVERTISEMENT

ಈ ಸಂಬಂಧ ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ‘ಬುಧವಾರ ರಾತ್ರಿ ಮೃತಳ ತಂಗಿಗೆ ಕರೆ ಮಾಡಿದ್ದ ನರಸಿಂಹ ಮೂರ್ತಿ, ನಿನ್ನ ಅಕ್ಕ ನೇಣು ಬಿಗಿದುಕೊಳ್ಳಲು ಹೋಗಿದ್ದಾಳೆ. ಬಂದು ಬುದ್ಧಿ ಹೇಳುವಂತೆ ಕೇಳಿಕೊಂಡಿದ್ದ. ಆದರೆ, ಆಗಾಗ ಪಾನಮತ್ತರಾಗಿ ಈ ರೀತಿ ಜಗಳ ಮಾಡಿಕೊಳ್ಳುವುದು ಸಾಮಾನ್ಯ ಎಂಬ ಕಾರಣಕ್ಕೆ ಸಂತ್ರಸ್ತೆಯ ತಂಗಿ ಇದನ್ನು ಉಪೇಕ್ಷಿಸಿದ್ದಳು. ಗುರುವಾರ ಮಧ್ಯಾಹ್ನ ಆಕೆಯ ಮೃತದೇಹ ಮನೆಯಲ್ಲಿ ಕಂಡುಬಂದಿದೆ’ ಎಂದಿದ್ದಾರೆ.

ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿವೈಎಸ್ಪಿ ನಾಗರಾಜ್, ಸರ್ಕಲ್ ಇನ್‌ಸ್ಪೆಕ್ಟರ್ ವೀರೇಂದ್ರ ಪ್ರಸಾದ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ಈರಮ್ಮ, ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.