ADVERTISEMENT

ಅಂಧ ಮಕ್ಕಳ ಶಾಲೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 7:02 IST
Last Updated 5 ಜುಲೈ 2013, 7:02 IST

ಹುಕ್ಕೇರಿ: ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠವಾದುದು. ಅಂಧ ಮಕ್ಕಳಿಗೆ ತೆರೆದಿರುವ ವಿದ್ಯಾ ಮಂದಿರ ಪರಮ ಶ್ರೇಷ್ಠವಾದುದು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಅವರು ತಾಲ್ಲೂಕಿನ ಕೋಚರಿ ಗ್ರಾಮದ್ಲ್ಲಲಿನ ಬಸವೇಶ್ವರ ಜೀರ್ಣೋದ್ಧಾರ ಸಮಿತಿ ವತಿಯಿಂದ ಸ್ಥಾಪಿಸಿದ `ಜಗದ್ಗುರು ರೇಣುಕ ಮತ್ತು ಬಸವೇಶ್ವರ ಅಂಧ ಮಕ್ಕಳ ಸಂಗೀತ ಮತ್ತು ಪ್ರಾಥಮಿಕ ವಸತಿ ಶಾಲೆ'ಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಶಾಲೆಗಳು ಇಂದು ನಾಯಿ ಕೊಡೆಯಂತೆ ಬೆಳೆಯುತ್ತಿವೆ.  ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾದ ಜನರಿಗೆ ಶಾಲೆ ತೆರೆಯದ ಇಂತಹ ದಿನಗಳಲ್ಲಿ ಗುರು-ವಿರಕ್ತರ ಹೆಸರಿನ ಸಮಾಗಮದಿಂದ ಕೂಡಿದ ಈ ಶಾಲೆಯು ಸಮಾಜಕ್ಕೆ ಮಾದರಿಯಾಗಲಿ ಎಂದ ಅವರು ಶಾಲೆಗೆ ಏನೇ ಕಷ್ಟ ಬಂದರೂ ತಾವು ಮುಂದೆ ನಿಂತು ಸಹಾಯ ಹಸ್ತ ಚಾಚುವುದಾಗಿ ಭರವಸೆ ನೀಡಿದರು.

ರೇಣುಕರ ಮತ್ತು ಬಸವೇಶ್ವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಕಣ್ಣಿದ್ದವರಿಗೆ ಸಹಾಯ ಮಡುವುದು ಸಹಾಯವಲ್ಲ. ಕಣ್ಣಿಲ್ಲದ ಅಂಧರಿಗೆ `ಹೃದಯದ ಕಣ್ಣಿಗೆ' ಸಹಕಾರ ನೀಡಿ ಅವರ ಬಾಳಿಗೆ ಬೆಳಕು ನೀಡುವುದು ನಿಜವಾದ ಸಹಾಯ ಎಂದರು.

ಮುಖ್ಯ ಅತಿಥಿಯಾಗಿದ್ದ ಚಿಕ್ಕೋಡಿ ಸಿ.ಬಿ.ಕೋರೆ ಪಾಲಿಟೆಕ್ನಿಕ್ ಪ್ರಚಾರ್ಯ ಬಿ.ಎ.ಪೂಜಾರ ಮಾತನಾಡಿದರು.
ಅಂಧ ಮಕ್ಕಳ ಶಾಲೆಗೆ ಉಚಿತವಾಗಿ ಕಂಪ್ಯೂಟರ್ ನೀಡಿದ ಶಿಕ್ಷಕಿ ಗೀತಾ ಧರಮೋಜಿ, ಹಾರ್ಮೋನಿಯಂ ನೀಡಿದ ಹಾಲಪ್ಪ ಕಟ್ಟೀಕರ ಮತ್ತು ನೀಡಿದ ವಿರೂಪಾಕ್ಷಿ ಧರಮೋಜಿ ಹಾಗು ತಬಲಾ ನೀಡಿದ ಬಾಬು ಖೋತ ಅವರನ್ನು ಶ್ರೀಗಳು ಸನ್ಮಾನಿಸಿದರು. ಸಂಸ್ಥಾಪಕ ಅಧ್ಯಕ್ಷೆ ನಿಂಗಮ್ಮ ನಾಯಿಕ, ಸಕ್ಕರೆ ಕಾರ್ಖಾನೆ ನಿರ್ದೇಶಕ ಅನಿಲ ದೇಸಾಯಿ, ದುಂಡಪ್ಪ ಹಿಂಗ್ಲಜೆ  ಸೇರಿದಂತೆ ಗ್ರಾಮದ ಪ್ರಮುಖರು ಮತ್ತಿತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.