ADVERTISEMENT

ಕನ್ನಡ ಭವನ ನಿರ್ಮಾಣಕ್ಕೆ ರೂ.10 ಲಕ್ಷ ನೆರವು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 9:40 IST
Last Updated 25 ಫೆಬ್ರುವರಿ 2011, 9:40 IST

ರಾಮದುರ್ಗ: ಬೆಳಗಾವಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ. ಅದನ್ನು ಹೊರತು ಪಡಿಸಿ ಉಳಿದ ವಿಷಯಗಳನ್ನು ಸೌಜನ್ಯಯುತವಾಗಿ ಮಾತನಾಡಲು ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚವಾಣ್ ಮುಂದಾದರೆ ಕರ್ನಾಟಕ ಮಾತುಕತೆಗೆ ಸಿದ್ಧವಾಗಿದೆ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಸ್ಪಷ್ಟ ಪಡಿಸಿದರು.

ಗುರುವಾರ ವಿಶ್ವ ಕನ್ನಡದ ಅಂಗವಾಗಿ ಪಟ್ಟಣದಲ್ಲಿ ಕನ್ನಡ ನುಡಿತೇರು ಜಾಗೃತಿ ಜಾಥಾದ ಮೆರವಣಿಗೆಯ ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಭಾಷೆ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ರಾಜಕಾರಣಿಗಳಿಗೆ ಪಾಠ ಕಲಿಸಲು ಮಾತುಕತೆಗೆ ಮುಂದಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿಯ ಕ್ರಮವನ್ನು ಅವರು ಸ್ಮರಿಸಿದರು.

 ವಿಶ್ವ ಕನ್ನಡ ಸಮ್ಮೇಳನದ ನೆನಪಿಗಾಗಿ ಬೆಳಗಾವಿ ಜಿಲ್ಲೆಯ ಹತ್ತೂ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಿಸಲು ಸ್ಥಳೀಯ ಆಡಳಿತ ನಿವೇಶನ ಪೂರೈಸಿದರೆ ಪ್ರಾಧಿಕಾರದಿಂದ ರೂ. 10 ಲಕ್ಷ ಅನುದಾನ ನೀಡುವುದಾಗಿ ಪ್ರಕಟಿಸಿದ ಅವರು ರೂ. 10 ಲಕ್ಷದಲ್ಲಿ ಭವನ ನಿರ್ಮಾಣ ಪೂರ್ಣಗೊಳ್ಳದು ಕನ್ನಡಿಗರು ವಂತಿಕೆ ಸಂಗ್ರಹಿಸಿ ಉತ್ತಮ ಭವನ ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು. 

  ಜಾಥಾ ಸಂಯೋಜಕ ಮತ್ತು ಕನ್ನಡ ಪ್ರಾಧಿಕಾರದ ಸದಸ್ಯ ಸಿದ್ದನಗೌಡ ಪಾಟೀಲ, ಕಿರುತೆರೆಯ ಕಲಾವಿದ ನಾಗರಾಜ ಮೂರ್ತಿ, ಮಲ್ಲಣ್ಣ ಯಾದವಾಡ, ಕಸಾಪ ಅಧ್ಯಕ್ಷ ನಾಗಕಲಾಲ್, ಸಿ. ಕೆ. ಜೋರಾಪೂರ ಮಾತನಾಡಿದರು. ತಾ.ಪಂ. ಅಧ್ಯಕ್ಷೆ ಮಂಜುಳಾ ದೇವರಡ್ಡಿ, ಜಿಪಂ ಸದಸ್ಯೆ ರತ್ನಾ ಯಾದವಾಡ, ಪುರಸಭೆ ಅಧ್ಯಕ್ಷ ಗೋವಿಂದ ಪತ್ತೇಪೂರ, ಪ್ರದೀಪ ಪಟ್ಟಣ, ತಾಪಂ ಸದಸ್ಯರಾದ ಆನಂದ ಜಗತಾಪ, ಮಹೇಶ ದೇಸಾಯಿ, ಕಾರ್ಯನಿರ್ವಾಹಕ ಅಧಿಕಾರಿ ಎಂ. ಎಂ. ಗೂಳಪ್ಪನವರ, ಜಿ.ಪಂ. ಅಧಿಕಾರಿ ವಿ. ಆರ್. ಮುನವಳ್ಳಿ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ತೊರಗಲ್ ಮಠದ ಚನ್ನಮಲ್ಲ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ತಹಸೀಲ್ದಾರ  ಗೀತಾ ಕೌಲಗಿ ಸ್ವಾಗತಿಸಿದರು. ಸುರೇಶ ಗುದಗನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.