ADVERTISEMENT

ಗಣೇಶೋತ್ಸವ ಶಾಂತಿಯುತ ಆಚರಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:55 IST
Last Updated 5 ಸೆಪ್ಟೆಂಬರ್ 2013, 6:55 IST

ಖಾನಾಪುರ: ಮುಂಬರುವ ಸೆ.9ರಿಂದ ಜರುಗುವ ಗಣೇಶೋತ್ಸವವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕೆಂದು ಸಿಪಿಐ ಮಹಾಂತೇಶ್ವರ ಸಲಹೆ ನೀಡಿದರು.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಜರುಗಿದ ಗಣೇಶೋತ್ಸವ ಶಾಂತಿಪಾಲನಾ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿವಿಧ ಧರ್ಮಗಳ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗಣೇಶೋತ್ಸವದಲ್ಲಿ ಪೆಂಡಾಲ್‌ಗಳ ಸುಸ್ಥಿತಿ, ವಿದ್ಯುತ್ ಸಂಪರ್ಕದ ಸ್ಥಿತಿಗತಿ ಹಾಗೂ ಪೆಂಡಾಲ್‌ನಲ್ಲಿ ಹಾಕಲಾಗುವ ಗೀತೆಗಳ ಬಗ್ಗೆ ಗಣೇಶೋತ್ಸವ ಮಂಡಳಿಯವರು ಗಮನ ವಹಿಸಬೇಕು. ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಅಶ್ಲೀಲ ಗೀತೆಗಳ ಪ್ರಸಾರಕ್ಕೆ ಅವಕಾಶ ನೀಡಬಾರದು ಎಂದರು.

ಗಣೇಶೋತ್ಸವಕ್ಕೆ ಮುಂಚಿತವಾಗಿ ಪಟ್ಟಣ ಪಂಚಾಯಿತಿ, ಕೆಇಬಿಗಳಿಂದ ಪರವಾನಿಗೆ ಪಡೆಯಬೇಕು ನಂತರ ಪೊಲೀಸ್ ಠಾಣೆಯಿಂದ ನೀಡಲಾದ ಅರ್ಜಿಯನ್ನು ಸಂಪೂರ್ಣವಾಗಿ ತುಂಬಿ ಮರಳಿಸಬೇಕು. ಹಬ್ಬದ ಸಂದರ್ಭದಲ್ಲಿ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಪೆಂಡಾಲ್ ಹಾಕಬೇಕು. ಗಣೇಶ ವಿಜರ್ಸನೆಯ ಸಂದರ್ಭದಲ್ಲಿ ಡಾಲ್ಬಿ ಸಿಸ್ಟಂ ಅಳವಡಿಸಲು ಇಲಾಖೆ ನಿರ್ಭಂಧಿಸಿದ ಕಾರಣ ಯಾವುದೇ ಕಾರಣಕ್ಕೂ ಡಾಲ್ಬಿ ಸೆಟ್ ಬಳಸಬಾರದು ಎಂದು ಸೂಚನೆ ನೀಡಿದರು.

ಪಿಎಸ್‌ಐ ಧೀರಜ ಶಿಂಧೆ ಸ್ವಾಗತಿಸಿದರು. ಎಸ್.ಟಿ ತೇಲಿ ನಿರೂಪಿಸಿದರು. ಶರೀಫ್ ವಂದಿಸಿದರು.

ನಂದಗಡ ವರದಿ: ತಾಲ್ಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿಯೂ ಗಣೇಶೋತ್ಸವ ಶಾಂತಿಸಭೆ ಸಿಪಿಐ ಮಹಾಂತೇಶ್ವರ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ನಂದಗಡ ಠಾಣೆಯ ಪಿಎಸ್‌ಐ ದಿಲೀಪ ನಿಂಬಾಳಕರ ಮಾತನಾಡಿದರು.

ನಂದಗಡ, ಹಲಶಿ, ಬೀಡಿ, ಇಟಗಿ, ಗಂದಿಗವಾಡ, ಕಕ್ಕೇರಿ ಗ್ರಾಮಗಳ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.