ADVERTISEMENT

ಛಲವಾದಿ ಪೀಠದಲ್ಲಿ ಸಂವಿಧಾನ ದೀಕ್ಷೆ: ಬಸವನಾಗಿದೇವ ಶ್ರೀ ಹೇಳಿಕೆ

ಉ.ಕ ವಿವಿಧ ದಲಿತ ಸಂಘಟನೆಗಳಿಂದ ಮಹಾಪರಿನಿರ್ವಾಣ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 6:16 IST
Last Updated 7 ಡಿಸೆಂಬರ್ 2017, 6:16 IST

ಬೆಳಗಾವಿ: ಚಿತ್ರದುರ್ಗದ ಛಲವಾದಿ ಪೀಠದಲ್ಲಿ ಸಂವಿಧಾನ ದೀಕ್ಷೆ ನೀಡುವ ಕಾರ್ಯಕ್ರಮವನ್ನು ಶೀಘ್ರವೇ ಆರಂಭಿ ಸಲಾಗುವುದು ಎಂದು ಪೀಠಾಧ್ಯಕ್ಷ ಬಸವನಾಗಿದೇವ ಸ್ವಾಮೀಜಿ ಹೇಳಿದರು.

ಉತ್ತರ ಕರ್ನಾಟಕದ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಇಲ್ಲಿ ಬುಧವಾರ ಆಯೋಜಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಲವರು ಧರ್ಮದ ಹೆಸರಿನಲ್ಲಿ ದೀಕ್ಷೆ ಕೊಡುತ್ತಾರೆ. ಆದರೆ ನಾನು ದೇಶದಲ್ಲಿ ಎಲ್ಲ ಧರ್ಮ, ಜಾತಿಯವರಿಗೂ ಮತದಾನದ ಹಕ್ಕು ನೀಡಿದ ಸಂವಿಧಾನದ ಹೆಸರಿನಲ್ಲಿ ದೀಕ್ಷೆ ನೀಡುತ್ತೇನೆ. ಪೀಠಕ್ಕೆ ಬರುವವರಿಗೆಲ್ಲ ಸಂವಿಧಾನ ಕುರಿತು ಜಾಗೃತಿ ಮೂಡಿಸಲಾಗುವುದು. ಈ ದೇಶದಲ್ಲಿ ಮಹಾತ್ಮ ಇದ್ದರೆ ಅವರು ಅಂಬೇಡ್ಕರ್ ಮಾತ್ರ. ಧರ್ಮಗ್ರಂಥವೆಂದರೆ ಭಾರತದ ಸಂವಿಧಾನವಷ್ಟೇ’ ಎಂದು ಹೇಳಿದರು.

ADVERTISEMENT

ಎಡಗೈ, ಬಲಗೈ ಬಿಡಿ: ‘ಧರ್ಮ, ದೇವರ ಹೆಸರಿನಲ್ಲಿ ನಮ್ಮನ್ನು ಹಿಂದಿನಿಂದಲೂ ಶೋಷಣೆ ಮಾಡಲಾಗಿದೆ. ಮೋಸಕ್ಕೆ ಒಳಗಾಗಿದ್ದೇವೆ. ಇನ್ನಾದರೂ ಜಾಗೃತರಾಗಬೇಕು. ಎಡಗೈ, ಬಲಗೈ ಎನ್ನುವುದನ್ನು ಬಿಡಬೇಕು. ನೋವು ಇಬ್ಬರಿಗೂ ಒಂದೇ ಎನ್ನುವುದನ್ನು ಮರೆಯಬಾರದು’ ಎಂದು ಮಾರ್ಮಿಕವಾಗಿ ಹೇಳಿದರು.

‘ಸಂವಿಧಾನದ ಆಶಯ ಇನ್ನೂ ಪೂರ್ಣ ಅನುಷ್ಠಾನ ಆಗಿಲ್ಲ. ರಾಜಕೀಯವಾಗಿ ಸರಿಯಾದ ಮೀಸಲಾತಿ ದೊರೆತಿಲ್ಲ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಅರ್ಹರನ್ನು ವಂಚಿಸುವ ಅಬ್ಬರ ಜೋರಾಗಿದೆ. ಅಸ್ಪೃಶ್ಯತೆ ಇನ್ನೂ ಜೀವಂತವಿದೆ. ನಗರಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ದಲಿತರಿಗೆ ಮನೆಗಳನ್ನು ಬಾಡಿಗೆಗೆ ಕೊಡುತ್ತಿಲ್ಲ. ನೇರವಾಗಿ ಜಾತಿ ಕೇಳಿದರೆ ಪ್ರಶ್ನಿಸಬಹುದು ಎಂದು ಮಾಂಸಾಹಾರಿಗಳಾ, ಶಾಕಾಹಾರಿಗಳಾ ಎಂದು ಕೇಳುತ್ತಾರೆ. ಮಾಂಸಾಹಾರಿಗಳು ಎಂದರೆ ಮನೆಯೇ ಸಿಗೋಲ್ಲ’ ಎಂದು ವಿಷಾದಿಸಿದರು.

‘ನೋಟಾ’ ಸಂವಿಧಾನ ವಿರೋಧಿ: ‘ಬಹಳ ಮಂದಿಗೆ ಸಂವಿಧಾನದ ಬಗ್ಗೆ ಸಮಾಧಾನವಿಲ್ಲ. ದಲಿತನೊಬ್ಬ ಅದನ್ನು ರಚಿಸಿದ ಎನ್ನುವುದು ಅದಕ್ಕೆ ಕಾರಣ. ಬ್ರಾಹ್ಮಣನೊಬ್ಬ ಇಂತಹ ಶ್ರೇಷ್ಠ ಸಂವಿಧಾನ ರಚಿಸಿದ್ದರೆ ಹೇಗೆ ಕೊಂಡಾಡುತ್ತಿದ್ದರು ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳುವುದಕ್ಕೂ ಆಗುವುದಿಲ್ಲ’ ಎಂದರು.

‘ಚುನಾವಣೆಯಲ್ಲಿ ಬಳಸುವ ಎಲೆಕ್ಟ್ರಾನಿಕ್‌ ಮತಯಂತ್ರಗಳಲ್ಲಿ 'ನೋಟಾ' (ಯಾರಿಗೂ ಮತ ಇಲ್ಲ)ಗೆ ಅವಕಾಶ ಕಲ್ಪಿಸಿರುವುದು ಸಂವಿಧಾನ ವಿರೋಧಿಯಾಗಿದೆ. ಸಂವಿಧಾನ ವಿರೋಧಿಸುತ್ತೇವೆ ಎನ್ನುವವರ ಪ್ರತಿನಿಧಿಯಂತೆ 'ನೋಟಾ' ಕಂಡುಬರುತ್ತಿದೆ. ಉತ್ತಮವಾದವರನ್ನು ಆರಿಸಿಕೊಳ್ಳಿ ಎನ್ನುತ್ತದೆ ಸಂವಿಧಾನ. ಅಂದರೆ ಉತ್ತಮ ಅಭ್ಯರ್ಥಿಗಳು ಸ್ಪರ್ಧಿಸಬೇಕು ಎನ್ನುವುದೂ ಆಗಿದೆ. ಹೀಗಾಗಿ, ಯಾರಿಗಾದರೊಬ್ಬರಿಗೆ ಮತ ಹಾಕಲೇಬೇಕು. ‘ನೋಟಾ’ ಸರಿಯಲ್ಲ’’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.