ಬೆಳಗಾವಿ: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾಗಿ ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಇಲಾಖೆ ಹೆಚ್ಚುವರಿ ನಿರ್ದೇಶಕ ಎಸ್. ದಿವಾಕರ್ ಹೇಳಿದರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರ ಮದಲ್ಲಿ ಅವರು ಮಾತನಾಡಿದರು. ‘ದೇಶದ ದೀನ–ದಲಿತರು, ಬಡವರ ಸಲುವಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟರು. ಇತಿಹಾಸವನ್ನು ಅಳವಾಗಿ ಅಧ್ಯಯನ ಮಾಡಿ ಇಲ್ಲಿರುವ ಅಸಮಾನತೆ ನಿರ್ಮೂಲನೆ ಮಾಡಬೇಕೆಂದು ಪಣ ತೊಟ್ಟಿದ್ದರು. ದಲಿತರ ಸಲುವಾಗಿ ಮಾತ್ರವೇ ಕೆಲಸ ಮಾಡದೆ ಎಲ್ಲ ಶೋಷಿತ ವರ್ಗದವರ ಪರವಾಗಿ ಕೆಲಸ ಮಾಡಿದವರು’ ಎಂದು ಸ್ಮರಿಸಿದರು.
ಕುಲಪತಿ ಪ್ರೊ.ಶಿವಾನಂದ ಹೊಸಮನಿ, ‘ಅಂಬೇಡ್ಕರ್ ವಿಚಾರಗಳು ಎಲ್ಲರಿಗೂ ತಲುಪುವಂತೆ ಆಗಬೇಕು. ಅವರ ಆದರ್ಶ ಮತ್ತು ಮೌಲ್ಯಗಳು ಎಲ್ಲ ಕಾಲದಲ್ಲೂ ಎಲ್ಲರಿಗೂ ಪ್ರಸ್ತುತವಾಗಿವೆ’ ಎಂದು ಅಭಿಪ್ರಾಯಪಟ್ಟರು.
ಪ್ರಕಾಶ ಕಟ್ಟಿಮನಿ ನಿರೂಪಿಸಿದರು. ಕುಲಸಚಿವ ಪ್ರೊ.ಸಿದ್ದು ಪಿ. ಆಲಗೂರು, ಹಣಕಾಸು ಅಧಿಕಾರಿ ಪರಶುರಾಮ ದುಡಗಂಟಿ, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಸಿ.ಎನ್. ವಾಘಮಾರೆ, ವಿಶೇಷಾಧಿಕಾರಿ ಪ್ರೊ.ವಿ.ಎಸ್. ಶೀಗೆಹಳ್ಳಿ, ಮಹೇಶ ಗಾಜಪ್ಪನವರ ಭಾಗವಹಿಸಿದ್ದರು.
ಹಿಡಕಲ್ ಡ್ಯಾಂನಲ್ಲಿ ಜಯಂತಿ
ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂ ಮಹಿಳಾ ಕಲ್ಯಾಣ ಸಂಸ್ಥೆಯಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಮತ್ತು ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಆಶ್ರಯದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ 127ನೇ ಜಯಂತಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎ.ಎಸ್.ಐ ಜಯಶ್ರೀ ಜನ್ಮಟ್ಟಿ ಭಾಗವಹಿಸಿದ್ದರು. ಯುವ ಸಾಹಿತಿ ಪ್ರಕಾಶ ಹೊಸಮನಿ, ಡಾ.ಭೀಮರಾವ್ ಅಂಬೇಡ್ಕರ್ ಅವರ ಕವನ ವಾಚನ ಮಾಡಿ ಅವರ ತತ್ವಗಳ ಕುರಿತು ಮಾತನಾಡಿದರು. ಬಸವರಾಜ ಮೇತ್ರಿ, ವಿನಾಯಕ ಪೂಜೇರಿ, ಪ್ರಮೀಣ ಬಡಿಗೇರ, ಎಸ್.ಬಿ. ಮಾವಿನಕಟ್ಟಿ, ಬಂಡೆಪ್ಪ ಮಾದರ, ತೇಜಸ್ವಿನಿ ಪೂಜೇರಿ, ಸಿದ್ದಪ್ಪಾ ಮಾದರ, ಪರಶುರಾಮ ಮಾದರ, ಶಿವನಿಂಗ ಮಾದರ, ಸುರೇಶ ಈರಗಾರ ಇದ್ದರು. ಗಂಗಾ ಬೆಳವಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.