ಸವದತ್ತಿ: ‘ವಚನಭ್ರಷ್ಟರು ಎಂದು ಆರೋಪಿಸಿ ಅಧಿಕಾರಕ್ಕೆ ಬಿಜೆಪಿ ನಾಯಕರು ಜೈಲು ಪಾಲಾದ್ರು. ಇದನ್ನೇ ಅಸ್ತ್ರವಾಗಿಸಿಕೊಂಡು ಕುರ್ಚಿ ಗಿಟ್ಟಿಸಿಕೊಂಡ ಕಾಂಗ್ರೆಸ್ ಭ್ರಷ್ಟ ಆಡಳಿತ ನಡೆಸುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ರೈತ ಸಾಲಮನ್ನಾದಲ್ಲಿ ರಾಜಕಾರಣ ಮಾಡುತ್ತಿವೆ. ಜೆ.ಡಿ.ಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು’ ಎಂದು ಜೆ.ಡಿ.ಎಸ್ ರಾಜ್ಯ ಪ್ರತಿನಿಧಿ ಗುರುರಾಜ ಹುಣಶಿಮರದ ಹೇಳಿದರು.
ಇಲ್ಲಿನ ಡಿ.ಎಫ್ ಖೋದಾನಪೂರಗೌಡ್ರ ಮನೆಯಲ್ಲಿ ನಡೆದ ಜೆ.ಡಿ.ಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ‘ಜೆ.ಡಿ.ಎಸ್ ಸರ್ಕಾರ ರೈತ ಪ್ರತಿನಿಧಿಗಳಿಂದ ರಚನೆಯಾಗಲಿದೆ. ಇದಕ್ಕೆ ಸವದತ್ತಿ ಅಧಿಕೃತ ಅಭ್ಯರ್ಥಿ ದೊಡ್ಡಗೌಡರ ಅವರೇ ಜೀವಂತ ಸಾಕ್ಷಿ’ ಎಂದರು.
‘ಮೋದಿ ಪ್ರಧಾನಮಂತ್ರಿಯಾಗಿ ರೈತರಿಗೇನು ಕೊಡಲಿಲ್ಲ. ಘೋಷಿಸಿದ ಬೆಳೆಹಾನಿ ಪರಿಹಾರ ಇಂದಿಗೂ ಬಂದಿಲ್ಲ. ನಿರುದ್ಯೋಗಿ ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿಸುವುದು ಇಂದಿಗೂ ಆಗಿಲ್ಲ. ದೇಶ ಸುತ್ತುವುದು, ನಿತ್ಯ ಯುದ್ಧದ ಮಾತುಗಳಿಂದ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ’ ಎಂದರು.
‘ಈ ಭಾಗದ ಪ್ರಮುಖ ಸಮಸ್ಯೆ ಕಳಸಾ ಬಂಡೂರಿ ನಾಲಾ ಜೋಡಣೆಗೆ ರಾಜ್ಯದಿಂದ ಆಯ್ಕೆಯಾದ ಸಂಸದರು ಬಾಯಿ ಬಿಡುತ್ತಿಲ್ಲ. ಸ್ಥಳೀಯ ಶಾಸಕರಿಗೆ ಇಲ್ಲಿನ ನೀರಿನ ಹಾಹಾಕಾರ ಗಮನಕ್ಕೆ ಬಂದಂತೆ ಕಾಣುತ್ತಲ್ಲ. ರೈತರು ಸಂಕಷ್ಟದಲ್ಲಿದ್ದಾರೆ ಎನ್ನುವುದೂ ತಿಳಿಲ್ಲ’ ಎಂದು ಟೀಕಿಸಿದರು.
ಜೆ.ಡಿ.ಎಸ್ ಅಧಿಕೃತ ಅಭ್ಯರ್ಥಿ ಎಂದು ಗುರುತಿಸಿಕೊಂಡ ದೊಡ್ಡಗೌಡರ ಖೋದಾನಪೂರ ಗೌಡ್ರು ಮಾತನಾಡಿ, ‘ಸಂಪೂರ್ಣ ರೈತ ಪರ ಕಳಕಳಿ ಇರುವ ಕುಮಾರಸ್ವಾಮಿ ಅವರು, ಮುಂದಿನ ಮುಖ್ಯಮಂತ್ರಿ ಯಾಗಲಿದ್ದಾರೆ. ಅವರಿಂದಲೇ ರಾಜ್ಯದಲ್ಲಿ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಲಿದೆ’ ಎಂದು ಅವರು ಹೇಳಿದರು.
ನಾರಾಯಣ ದೇವರಡ್ಡಿ, ಮಂಜುನಾಥ ರೇಣುಕೆಗೌಡರ, ದಿಲಾವರ ಅತ್ತಾರ, ಶ್ರೀಶೈಲ ಮೂಲಿಮನಿ, ರಿಯಾಜ ಪಟಾದ, ಕುಮಾರ ಜಕಾತಿ, ಅಲಿಸಾಬ್ ನದಾಫ್, ಬಾಬುಸಾಬ ಬಾಗೋಜಿಕೊಪ್ಪ, ಬಸವರಾಜ ಕೊಣನ್ನವರ, ಶ್ರೀಧರ ಹಾಸಂಗಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.