ADVERTISEMENT

ಪ್ರತಿಭಟನಾ ಸ್ಥಳ ಖಾಲಿ ಖಾಲಿ...

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 6:29 IST
Last Updated 25 ನವೆಂಬರ್ 2017, 6:29 IST
ಶುಕ್ರವಾರ ಖಾಲಿ ಇದ್ದ ಪೆಂಡಾಲ್‌
ಶುಕ್ರವಾರ ಖಾಲಿ ಇದ್ದ ಪೆಂಡಾಲ್‌   

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಹತ್ತು ದಿನ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 45ಕ್ಕೂ ಹೆಚ್ಚು ಸಂಘ–ಸಂಸ್ಥೆಯವರು ಹಾಗೂ ಸಮಾಜದವರು ಪ್ರತಿಭಟನೆ ನಡೆಸಿ ಸರ್ಕಾರದ ಗಮನಸೆಳೆದರು.

ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌, ಕೊಂಡಸಕೊಪ್ಪ ಗ್ರಾಮದ ಗುಡ್ಡ ಹಾಗೂ ಹಲಗಾ ಗ್ರಾಮದ ಹೊರವಲಯದಲ್ಲಿ ಈ ಬಾರಿ ಪ್ರತಿಭಟನೆಗೆ ವ್ಯವಸ್ಥೆ ಮಾಡಲಾಗಿತ್ತು. ಸುವರ್ಣ ಗಾರ್ಡನ್‌ನಲ್ಲಿ ಏಳು ಪೆಂಡಾಲ್‌ಗಳನ್ನು ಹಾಕಲಾಗಿತ್ತು. ಪ್ರತಿಭಟನಾಕಾರರಿಗೆ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಅಂಬೇಡ್ಕರ್‌ ಉದ್ಯಾನ ಬಳಿ ಸಮಾವೇಶಗೊಳ್ಳುತ್ತಿದ್ದ ಸಂಘಟನೆ ಗಳವರನ್ನು ಪೊಲೀಸರು ಬಸ್‌, ವ್ಯಾನ್‌ಗಳಲ್ಲಿ ಕರೆತಂದು ಸುವರ್ಣ ಗಾರ್ಡನ್‌ಗೆ ತಂದು ಬಿಡುತ್ತಿದ್ದರು.

ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಎರಡು ಪ್ರತಿಭಟನೆಗಳು ಮಾತ್ರ ನಡೆದವು. ಪ್ರತಿಭಟನಾಕಾರರು, ಪೊಲೀಸರಿಂದ ತುಂಬಿರುತ್ತಿದ್ದ ಬಹುತೇಕ ಪೆಂಡಾಲ್‌ಗಳು ಖಾಲಿ ಇದ್ದವು. ಚುರುಮುರಿ, ವಡಾಪಾವ್‌, ರೊಟ್ಟಿ, ಉಪಾಹಾರ, ಬಾಳೆಹಣ್ಣು, ಸೀಬೆ, ಟೀ–ಕಾಫಿ ಮಾರುವವರು ಕೂಡ ಇತ್ತ ಬಂದಿರಲಿಲ್ಲ.

ADVERTISEMENT

ಕೆಲವು ಪೊಲೀಸರು ಹಾಗೂ ಮಾಧ್ಯಮದವರು ಇದ್ದದ್ದು ಹೊರತುಪಡಿಸಿದರೆ ಪ್ರತಿಭಟನಾ ಸ್ಥಳ ಬಹುತೇಕ ಬಿಕೋ ಎನ್ನುತ್ತಿತ್ತು. ಭದ್ರತೆಗೆ ನಿಯೋಜಿಸಿದ್ದ ಪೊಲೀಸರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿತ್ತು. ಹೊರಜಿಲ್ಲೆಗಳಿಂದ ಬಂದಿದ್ದ ಪೊಲೀಸರು ಲಗೇಜ್‌ ಸಮೇತ ತಮ್ಮೂರುಗಳತ್ತ ತೆರಳುತ್ತಿದ್ದುದು ಕಂಡುಬಂತು. ಸಂಜೆ ವೇಳೆಗೆ, ಕೆಲವು ಪೆಂಡಾಲ್‌ಗಳನ್ನು ತೆರವುಗೊಳಿಸುವ ಕೆಲಸದಲ್ಲಿ ಕಾರ್ಮಿಕರು ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.