ADVERTISEMENT

ಬರಗಾಲ: ಸಾಲ ತೀರಿಸಲು ಜಾನುವಾರುಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 10:00 IST
Last Updated 26 ಜೂನ್ 2012, 10:00 IST

ಹುಕ್ಕೇರಿ: ಕೃಷಿ ಮತ್ತು ಕೃಷಿಕ ಭಾರತ ದೇಶದ ಬೆನ್ನೆಲುಬು. ಇದನ್ನು ಬಹುತೇಕ ನೀತಿ ರೂಪಕರು, ತಜ್ಣರು, ಪಂಡಿತರು ಮತ್ತು ಉಪನ್ಯಾಸಕರು ಹೇಳುವ ಮಾತಿದು. ಇದು ಸತ್ಯವು ಕೂಡಾ. ಏಕೆಂದರೆ ಇಂದಿಗೂ ಕೂಡಾ ನೂರಕ್ಕೆ ಶೇ.60ರಷ್ಟು ಜನರು ಕೃಷಿಯನ್ನೆ ಅವಲಂಬಿಸಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.

ಆದರೆ ಅವರು ಜೀವನ ಸಾಗಿಸಲು ಬೇಕಾದ ಸಲಕರಣೆ ಹಿಡಿದು ಕೃಷಿಗೆ ಆಧಾರವಾಗಿರುವ ಎತ್ತು-ಹೋರಿ, ಎಮ್ಮೆ, ಆಕಳು ಮತ್ತಿತರ ಸಂಬಂಧಿಸಿದ ರಾಸುಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಜೊತೆಗೆ ಕೃಷಿಕನ ಬದುಕು ದಯನೀಯವಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ಅವರು ಸಾಕಿ ಬೆಳೆಸುವ ಅವರ ಜೀವನದ ಅವಿಭಾಜ್ಯ ಅಂಗವಾಗಿರುವ ರಾಸುಗಳ ಮಾರಾಟವೇ ಕಾರಣ.

ಪಟ್ಟಣದ ಬೆಳಗಾವಿ ರಸ್ತೆ ಬದಿಗೆ ಇರುವ ದನದ ಪೇಟೆಯಲ್ಲಿ ಸುತ್ತಾಡಿದಾಗ ವಿವಿಧ ಹಳ್ಳಿಗಳಿಂದ ಬಂದ ರೈತರು ತಮ್ಮ ಎತ್ತು-ಹೋರಿಗಳನ್ನು ಮನಸ್ಸಿಲ್ಲದೆ ಮನಸ್ಸಿನಿಂದ ಮಾರಾಟ ಮಾಡುವ ಸ್ಥಿತಿ ಕಂಡು ಬಂದಿತು.

ಮಾರಾಟಕ್ಕೆ ಕಾರಣ ಕೇಳಿದಾಗ ತಮ್ಮ ದನುಕರುಗಳಿಗೆ ಮೇವಿನ ಮತ್ತು ನೀರಿನ ತೊಂದರೆ ಎಂದು ಶಿರಹಟ್ಟಿಯ ಬಸವಣ್ಣಿ ಗುಡದಿ ಹೇಳಿದರು.

ತಮ್ಮ ಕುಟುಂಬಕ್ಕೆ ಮಾಡಿದ ಸಾಲ ತೀರಿಸಲು ಆಗದೆ ಇರುವುದರಿಂದ ತಾವು ತಮ್ಮ ದನಗಳನ್ನು ಮಾರಾಟ ಮಾಡುತ್ತಿರುವದಾಗಿ ಬೆಳವಿಯ ಭೀಮಸೇನ ತಳವಾರ ಹೇಳಿದರು. ಮಳೆಯಾಗದೆ ಇರುವದರಿಂದ ದನಗಳ ಮಾಲಿಕರು ಅವುಗಳ ನಿರ್ವಹಣೆ ಮಾಡುವದು ಕಷ್ಟವಿದೆ ಎಂಬ ಕಾರಣದಿಂದ ದನಗಳನ್ನು ಮಾರುವರು ಎಂದು ಹುಕ್ಕೇರಿಯ ರಕ್ಷೆಪ್ಪ ಕಾಗಲೆ ತಿಳಿಸಿದರು.

ಹುಲ್ಲೋಳಿ ಹಟ್ಟಿಯ ರೈತ ಜಯವಂತ ಘಸ್ತಿ ಮಳೆ ಇರದೆ ಇರುವುದರಿಂದ ಎತ್ತುಗಳಿಗೆ ಬೆಲೆಯೂ ಕೂಡಾ ಬರುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು. ಮಳೆಯಾದರೆ ಕೃಷಿಗೆ ದನಗಳ ಅವಶ್ಯಕತೆ ಇರುದರಿಂದ ಅವುಗಳ ಬೇಡಿಕೆ ಹೆಚ್ಚುತ್ತದೆ. ಆದರೆ ಸದ್ಯ ಮಳೆ ಬಾರದ್ದರಿಂದ ಸುಮಾರು 20 ಸಾವಿರದಿಂದ 60 ಸಾವಿರದ ನಡುವೆ ರಾಸುಗಳ ಮಾರಾಟ ನಡೆದಿದೆ ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.