ADVERTISEMENT

ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 7:55 IST
Last Updated 18 ಅಕ್ಟೋಬರ್ 2011, 7:55 IST

ಬೈಲಹೊಂಗಲ: ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿ ರೈತ ಹಿತ ರಕ್ಷಣಾ ಸಮಿತಿ ಸದಸ್ಯರು ಜೆಡಿಎಸ್ ಮುಖಂಡ ಶಂಕರ ಮಾಡಲಗಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ  ತಹಸೀಲ್ದಾರ ಪಿ.ಎನ್.ಲೋಕೇಶ ಮೂಲಕ ಸೋಮವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜೆ.ಡಿ.ಎಸ್. ರಾಜ್ಯ ಮುಖಂಡ ಅಶೋಕ ಪೂಜಾರಿ ಮಾತನಾಡಿ, ರೈತರ ಹೋರಾಟಕ್ಕೆ ಅಧಿಕಾರಿಗಳು ತಡೆಯೊಡ್ಡದೇ, ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಮಳೆಯ ಅಭಾವದಿಂದ ಬೈಲಹೊಂಗಲ ಮತಕ್ಷೇತ್ರದಲ್ಲಿ ವಿವಿಧ ಬೆಳೆಗಳು ನಾಶವಾಗಿದ್ದು, ಬೆಳೆ ವಿಮೆ ಜಾರಿಗೊಳಸಿ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡುವಂತೆ ಆಗ್ರಹಿಸಿದರು. ರೈತರ ಬಡ್ಡಿ ಹಾಗೂ ಸಾಲ ಮನ್ನಾ ಮಾಡಬೇಕು. ಪಂಪ್‌ಸೆಟ್‌ಗಳಿಗೆ ನಿರಂತರ 8 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಭಾಗ್ಯಲಕ್ಷ್ಮೀ ಯೋಜನೆಗೆ ಹೆಣ್ಣು ಮಗು ಜನಿಸಿದ ಮೂರು ತಿಂಗಳ ಒಳಗೆ ಬಿ.ಪಿ.ಎಲ್. ಕಾರ್ಡ್ ಸಮೇತ ದಾಖಲೆಗಳನ್ನು ಅಂಗನವಾಡಿಗೆ ಫಲಾನುಭವಿಗಳು ಸಲ್ಲಿಸಬೇಕು. ಕಳೆದ ಎರಡು ವರ್ಷಗಳಿಂದ ಹೊಸ ಪಡಿತರ ಚೀಟಿ ವಿತರಣೆಯಾಗಿಲ್ಲ, ಪಡಿತರ ವಿತರಣೆಗೆ ವ್ಯವಸ್ಥೆ ಕಲ್ಪಿಸಬೇಕು.
 
ಒಂದು ವರ್ಷದಿಂದ ಜನಿಸಿದ ಹೆಣ್ಣು ಮಕ್ಕಳ ತಂದೆ-ತಾಯಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆಯಾಗಿಲ್ಲ. ಈ ಕುರಿತು ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿದ್ದು, ತಕ್ಷಣ ದುರಸ್ತಿ ಮಾಡಬೇಕು.

ಭಾಗ್ಯಜ್ಯೋತಿ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದ್ದು,   ರೂ.15 ಹಾಗೂ 16 ಸಾವಿರ ಬಿಲ್ ಪಾವತಿಸುವಂತೆ ಕೆ.ಇ.ಬಿ. ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಭಾಗ್ಯಜ್ಯೋತಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ ಪಿ.ಎನ್.ಲೋಕೇಶ ಮಾತನಾಡಿ, ತಾಲ್ಲೂಕಿನಲ್ಲಿ ಬೆಳೆ ವಿಫಲವಾಗಿರುವ ಗ್ರಾಮಗಳ ವ್ಯಾಪ್ತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ತಿಳಿಸಿದರು. ಪಡಿತರ ಚೀಟಿ ವಿತರಣೆ ಮಾಡುವ ಪ್ರಕ್ರಿಯೆಗೆ ಸರ್ಕಾರ ಆದೇಶ ಹೊರಡಿಸಬೇಕಾಗಿದೆ ಎಂದರು.


ಇದಕ್ಕೂ ಮೊದಲು ರೈತಭವನದಿಂದ  ತಹಸೀಲ್ದಾರ ಕಾರ್ಯಾಲಯದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.  ಪ್ರತಿಭಟನಾ ಮೆರವಣಿಗೆಯಲ್ಲಿ  ಮೈಕ್ ಉಪಯೋಗಿಸಲು ಅನುಮತಿ ನೀಡದೇ ಇರುವುದರಿಂದ ಪ್ರತಿಭಟನಾಕಾರರು ಸಿ.ಪಿ.ಐ. ಕಾರ್ಯಾಲಯದ ಎದುರು ಕೆಲ ಹೊತ್ತು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಾ.ಪಂ.ಸದಸ್ಯ ಧೂಳಪ್ಪ ಇಟಗಿ, ಗ್ರಾ.ಪಂ.ಅಧ್ಯಕ್ಷ ಸೋಮನಗೌಡ ಗೌಡರ, ಮೂಗಬಸವ ಗ್ರಾಮದ ಎಸ್.ಎಸ್.ಕುಸಲಾಪೂರ, ಮಡಿವಾಳಪ್ಪ ಮೂಗಬಸವ, ಮಲ್ಲಿಕಾರ್ಜುನ ಹುಂಬಿ, ವೈ.ಎಂ.ಕಡಕೋಳ, ಐ.ಎ. ವಾಲೀಕಾರ, ಪುರಸಭೆ ಸದಸ್ಯ ಸುಬಾನಿ ಸಯ್ಯದ ಸೇರಿದಂತೆ ತಾಲ್ಲೂಕಿನ ರೈತರು ಹಾಗೂ ಜೆ.ಡಿ.ಎಸ್. ಕಾರ್ಯಕರ್ತರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT