ADVERTISEMENT

ಬಿ.ಬಿ.ಮಮದಾಪುರ ಅವರ 121ನೆಯ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 3:30 IST
Last Updated 19 ಮಾರ್ಚ್ 2012, 3:30 IST

ಬೆಳಗಾವಿ: `ಉನ್ನತ ಹುದ್ದೆಯನ್ನು ಹೊಂದಿ ಐಷಾರಾಮಿ ಜೀವನ ನಡೆಸಬಹುದಾಗಿದ್ದ ಬಿ.ಬಿ. ಮಮದಾಪುರ ಅವರು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರ ನೀಡಿದ ಕೊಡುಗೆ ಮಾದರಿಯಾಗಿದೆ ಎಂದು ಪ್ರೊ. ಎಸ್.ಎಸ್. ಪಟಗುಂದಿ ಅಭಿಪ್ರಾಯಪಟ್ಟರು.

ಬಿ.ಬಿ. ಮಮದಾಪುರ ಪ್ರತಿಷ್ಠಾನ ಹಾಗೂ ಕಾರಂಜಿಮಠದ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮಮದಾಪುರ ಅವರ 121ನೆಯ ಜನ್ಮ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಕೆಎಲ್‌ಇ ಸಂಸ್ಥೆ ಕಟ್ಟುವುದರಲ್ಲಿ ಅವರ ಪಾತ್ರ ದೊಡ್ಡದಾಗಿದೆ. ಶೈಕ್ಷಣಿಕ ರಂಗದ ಪ್ರಗತಿಗೆ ತಮ್ಮ ಆಯುಷ್ಯವನ್ನೇ ಧಾರೆ ಎರೆದಿದ್ದರು~ ಎಂದು ಅವರು ಹೇಳಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಜನಮನದಲ್ಲಿ ನಿರಂತರವಾಗಿ ಉಳಿದಿರುವ ಮಮದಾಪುರ ಅವರ ಶೈಕ್ಷಣಿಕ ಚಿಂತನೆ, ಸಾಧನೆಗಳು ಅನುಕರಣೀಯವಾಗಿವೆ. ಮಮದಾಪುರ ಅವರು ಸೇರಿದಂತೆ ಸಪ್ತರ್ಷಿಗಳು ನೆಟ್ಟ ಕೆಎಲ್‌ಇ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ ಎಂದರು.

ಕವಿ ಡಾ.ಬಿ.ಎ. ಸನದಿ, ಉಪನ್ಯಾಸಕರಾಗಿದ್ದ ಎಸ್.ವೈ. ನಾಯಕ, ವಕೀಲ ಎಸ್.ವೈ. ಪಾಟೀಲ ಮಾತನಾಡಿ, ಮಮದಾಪುರ ತತ್ವ, ಆದರ್ಶಗಳ ಬಗೆಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ ಮಾತನಾಡಿ, `ಕೆಎಲ್‌ಇ ಸಂಸ್ಥೆ ಆರಂಭಿಸಿದ ಸಪ್ತರ್ಷಿಗಳ ಜೀವನ ಕಥೆ ಪಠ್ಯದಲ್ಲಿ ಸೇರಿಸಬೇಕು. ವಿದ್ಯಾರ್ಥಿಗಳಿಗೆ ಅವರ ಬಗೆಗೆ ತಿಳಿಯಬೇಕು~ ಎಂದರು.

ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, `ಮಮದಾಪುರ ಅವರು ಸಮಾಜದ ಋಣವನ್ನು ಸಂಪೂರ್ಣವಾಗಿ ತೀರಿಸಿದ್ದಾರೆ. ಸಪ್ತರ್ಷಿಗಳು ಸದಾಕಾಲವೂ ಸ್ಮರಣೀಯರಾಗಿದ್ದಾರೆ~ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕವನ ವಾಚನವೂ ನಡೆಯಿತು.

ವಾಮನ ಕುಲಕರ್ಣಿ (ಪ್ರಥಮ), ಡಾ.ಗುರುದೇವಿ ಹುಲೆಪ್ಪನವರಮಠ (ದ್ವಿತೀಯ), ನಾಗೇಶ ನಾಯಕ (ತೃತೀಯ) ಬಹುಮಾನ ಪಡೆದುಕೊಂಡರು.ಸುಜಾತಾ ವಸ್ತ್ರದ ಪ್ರಾರ್ಥಿಸಿದರು. ಮೋಹನ ಹೂಗಾರ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ಹೂಗಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.