ADVERTISEMENT

ಬೆಳ್ಳಿಹಬ್ಬ ಆಚರಣೆ ಇಂದು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 9:37 IST
Last Updated 22 ಡಿಸೆಂಬರ್ 2012, 9:37 IST

ಚಿಕ್ಕೋಡಿ: ತಾಲ್ಲೂಕಿನ ಕೋಥಳಿ-ಕುಪ್ಪಾನವಾಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ಏಕೈಕ ಜವಾಹರ ನವೋದಯ ವಿದ್ಯಾಲಯವು ಇದೀಗ ಬೆಳ್ಳಿ ಹಬ್ಬದ ಸಂಭೃಮದಲ್ಲಿದೆ. ಜ್ಞಾನ ಪ್ರಸಾರದಲ್ಲಿ ನಿರಂತರ 25 ವಸಂತಗಳನ್ನು ಪೂರೈಸಿರುವ ಈ ಜ್ಞಾನ ದೇಗುಲದ ಸಂಭ್ರಮಾಚರಣೆಗೆ ಹಳೆಯ ವಿದ್ಯಾರ್ಥಿಗಳ ಬಳಗ ಮತ್ತು ವಿದ್ಯಾಲಯದ ಸಿಬ್ಬಂದಿ ಅಣಿಯಾಗಿದ್ದು, ಇದೇ 22 ರಂದು ಬೆಳ್ಳಿಹಬ್ಬ ಸಮಾರಂಭ ನೆರವೇರಲಿದೆ.

ಶಾಂತಿಗಿರಿಯ ಅಡಿಯಲ್ಲಿ ಪ್ರಶಾಂತವಾದ ಪ್ರದೇಶದಲ್ಲಿ ಹರಡಿಕೊಂಡಿರುವ ಜವಾಹರ ನವೋದರ ವಿದ್ಯಾಲಯ ಆರಂಭಗೊಂಡಿದ್ದು 1988ರಲ್ಲಿ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ ಮಂಜೂರಾದ ಈ ವಿದ್ಯಾಲಯದ ಸ್ಥಾಪನೆಗೆ ಆಚಾರ್ಯ ದೇಶಭೂಷಣ ಮಹಾರಾಜರು 32.8 ಎಕರೆಯಷ್ಟು ಭೂಮಿಯನ್ನು ಕೊಡುಗೆಯಾಗಿ ನೀಡಿದ್ದರು. ಈ ಕಾರ್ಯದಲ್ಲಿ ಚಿಕ್ಕೋಡಿ ಮತ್ತು ಕೋಥಳಿ-ಕುಪ್ಪಾನವಾಡಿಯ ಹಿರಿಯರು ಮತ್ತು ಸಾರ್ವಜನಿಕರ ಸಹಾಯ, ಸಹಕಾರವನ್ನು ಮರೆಯುವಂತಿಲ್ಲ.

ಎಸ್.ವಿ ಶೇಷಾದ್ರಿ ಅವರು ವಿದ್ಯಾಲಯದ ಪ್ರಥಮ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡು ಅಲ್ಲಿನ ಶೈಕ್ಷಣಿಕ ಅಭಿವೃದ್ದಿಗೆ ನಾಂದಿ ಹಾಡಿದರು. ವಿದ್ಯಾಲಯದಲ್ಲಿ ಕೇಂದ್ರಿಯ ಶಿಕ್ಷಣ ಮಾಧ್ಯಮಿಕ ಮಂಡಳಿಯ ಪಠ್ಯಕ್ರಮ ಅನುಸರಿಸುತ್ತಿದ್ದು, 6 ರಿಂದ 12ನೇ ತರಗತಿವರೆಗೆ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ನ ಮತ್ತು ಅಕ್ಷರದಾಸೋಹ ನೀಡುತ್ತಿದೆ.

`ಪ್ರತಿ ವರ್ಷವೂ ಸಿಬಿಎಸ್‌ಇ ಮಾದರಿಯಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ನೀಡುತ್ತಿದೆ. ಇಲ್ಲಿ ಕಲಿತ ಮಂಜುನಾಥ ಭಜಂತ್ರಿ ಎಂಬುವವರು ಐಎಎಸ್,  ಶಿರೀಷ್ ಕಾಂಬಳೆ ಐಆರ್‌ಎಸ್ ತೇರ್ಗಡೆ ಹೊಂದಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದಾರೆ.

ಸುರೇಶ ಇಟ್ನಾಳ ಧಾರವಾಡದಲ್ಲಿ ಸಹಾಯಕ ಆಯುಕ್ತರಾಗಿ, ರವಿ ಕರಲಿಂಗನ್ನವರ ಬಾಗಲಕೋಟೆ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರೀಯ ಡಿಫೆನ್ಸ್ ಅಕಾಡೆಮಿ, ಎಸ್‌ಜಿ.ಎಫ್.ಐ.ಗೂ ಆಯ್ಕೆಯಾಗಿದ್ದಾರೆ. ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಐಐಟಿ ಹಾಗೂ ಸೂರತ್ಕಲ್ ಇಂಜಿನಿಯರಿಂಗ್ ಕಾಲೇಜುಗಳನ್ನು ಸೇರಿ ತಮ್ಮ ವೃತ್ತಿ ನೈಪುಣ್ಯತೆ ತೋರಿದ್ದಾರೆ' ಎನ್ನುತ್ತಾರೆ ಪ್ರಾಚಾರ್ಯ ವಿ.ರಾಮನಾಥನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT