ADVERTISEMENT

ಭೂಮಿಯ ಫಲವತ್ತತೆ ಕಾಪಾಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 6:55 IST
Last Updated 1 ಜುಲೈ 2013, 6:55 IST

ಗೋಕಾಕ: ಭೂಮಿಯಲ್ಲಿನ ಫಲವತ್ತತೆ, ಲಘು ಪೋಷಕಾಂಶಗಳನ್ನು ಕಾಪಾಡಲು ನೀರಿನ ನಿರ್ವಹಣೆ ಮಾಡುವ ಕಡೆ ರೈತರು ಹೆಚ್ಚಿನ ಗಮನ ನೀಡುವ ಅವಶ್ಯಕತೆ ಇದೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಸಲಹೆ ನೀಡಿದರು.

ಇತ್ತೀಚೆಗೆ ತಾಲ್ಲೂಕಿನ ಕಲ್ಲೋಳಿ ಗ್ರಾ.ಪಂ. ಆವರಣದಲ್ಲಿ ಜಿ.ಪಂ., ಕೃಷಿ ಇಲಾಖೆ ಹಾಗೂ ಅರಭಾವಿಯ ಕೃಷಿ ಸಂಶೋಧನಾ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೃಷಿಕರಿಗಾಗಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಭೂ ಚೇತನ ಮತ್ತು ಬೀಜೋಪಚಾರ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭೂಮಿಗೆ ನೀರು ಉಣಿಸುವ ಸಂದರ್ಭದಲ್ಲಿ ಅದು ಪೋಲಾಗದೇ ಅವಶ್ಯಕತೆಗೆ ತಕ್ಕಂತೆ ಸದುಪಯೋಗವಾಗಬೇಕು ಎಂದರು.

ಕೃಷಿಕರು ಆರ್ಥಿಕವಾಗಿ ಸಬಲರಾಗಲು ಆಧುನಿಕ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ಬಿ.ಬಿ.ಬೆಳಕೂಡ ಅವರು ಮಾತನಾಡಿ, ಕೃಷಿಕರು ಭೂಮಿಯನ್ನು ಬಿತ್ತನೆ ಮಾಡುವ ಮೊದಲು ಮಣ್ಣಿನ ಪರೀಕ್ಷೆ ಹಾಗೂ ಬೀಜೋಪಚಾರ ಮಾಡಿಸುವುದು ಅವಶ್ಯ ಎಂದರು.

ಅರಭಾವಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಮೃತ್ಯುಂಜಯ ವಾಲಿ, ಬೇಸಾಯ ತರಬೇತಿ ತಜ್ಞ ಡಾ. ಹಳ್ಳಿಕೇರಿ ಹಾಗೂ ಸಸ್ಯರೋಗ ತಜ್ಞ ಡಾ. ಕುಲಕರ್ಣಿ ಅವರು ಭೂ ಚೇತನ, ಬೀಜೋಪಚಾರ ಮಾಡುವ ಕುರಿತು ಮಾಹಿತಿ ನೀಡಿದರು.

ವಕೀಲ ಶಂಕರ ಗೋರೋಶಿ, ಗ್ರಾ.ಪಂ. ಸದಸ್ಯ ಕೃಷ್ಣ ಮುಂಡಿಗಿನಾಳ, ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಶಿವಗೊಂಡ ವ್ಯಾಪಾರಿ, ಸಹದೇವ ಹೆಬ್ಬಾಳ, ರಾಜಪ್ಪ ಗೋಸಬಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಾಟೀಲ ಸಹಾಯಕ ಕೃಷಿ ಅಧಿಕಾರಿ ಆರ್.ಜಿ.ನಾಗನ್ನವರ ಉಪಸ್ಥಿತರಿದ್ದರು. ಎಆರ್‌ಎಸ್ ಅಧಿಕಾರಿ ಮಂಜುನಾಥ ಜನ್ಮಟ್ಟಿ ಸ್ವಾಗತಿಸಿ, ನಿರೂಪಿಸಿದರು. ವಿ.ಬಿ.ಬಿರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.