ಬೈಲಹೊಂಗಲ: ತಾಲ್ಲೂಕಿನ ನಯಾ ನಗರ ಗ್ರಾಮದ ಮೃತ ರೈತನ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ಧನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಹಾಗೂ ಕುಟುಂಬ ಸದಸ್ಯನಿಗೆ ಹೊರಗುತ್ತಿಗೆ ಆಧಾರದ ಮೇಲೆ ವಾಟರಮನ್ ಕೆಲಸ ನೀಡಲು ಪುರಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಪುರಸಭೆಯಲ್ಲಿ ಶಾಸಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ, ಉಪಾಧ್ಯಕ್ಷ ನಿಸಾರ್ ಅಹ್ಮದ ತಿಗಡಿ, ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಆಡಳಿತ ಮಂಡಳಿ ಸದಸ್ಯರು ಈ ನಿರ್ಣಯ ಕೈಗೊಂಡು ಠರಾವ್ ಪಾಸ್ ಮಾಡಿದರು.
ಕುಡಿವ ನೀರಿನ ಸಂಕಷ್ಟ ಎದು ರಾಗುವ ಸಂಭವದಿಂದ ಮಲಪ್ರಭಾ ನದಿ ದಡದಲ್ಲಿನ ಪಂಪ ಸೆಟ್ಗಳ ವಿದ್ಯುತ್ ಕಡಿತ ಗೊಳಿಸಲು ಪುರಸಭೆಯಿಂದ ಕ್ರಮ ಕೈಕೊಳ್ಳಲಾಗಿತ್ತು. ಪಂಪಸೆಟ್ ವಿದ್ಯುತ್ ಕಡಿತಗೊಂಡಿದ್ದರಿಂದ ರೈತ ಪಾಂಡುರಂಗ ಯಲ್ಲಪ್ಪ ಸಿದ್ರಾಮ ನ್ನವರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದರಿಂದ ಗ್ರಾಮದ ರೈತರು ಮೃತ ರೈತನಿಗೆ ಪರಿಹಾರ ಕೋರಿ ಪುರಸಭೆ ಎದುರು ಸೋಮವಾರ ಶವದೊಂದಿಗೆ ಪ್ರತಿಭಟನೆ ನಡೆಸಿದ್ದರಿಂದ ತುರ್ತು ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರಗೌಡ ಪಾಟೀಲ, ವಿರೋಧ ಪಕ್ಷದ ನಾಯಕ ಬಾಬು ಹರಕುಣಿ, ಮಹಾಂತೇಶ ತುರಮರಿ, ಮಹೇಶ ಹರಕುಣಿ, ಮಡಿವಾಳಪ್ಪ ಹೋಟಿ, ಬಾಬು ಕುಡಸೋಮಣ್ಣವರ, ಸಂಜುಗೌಡ ಪಾಟೀಲ, ಕುತುಬುದ್ದಿನ ಮುಲ್ಲಾ ಪರಿಹಾರಕ್ಕೆ ಪ್ರಸ್ತಾವ ಕಳಿಸಲು, ಮೃತ ರೈತನ ಸಹೋದರ ಬಸನಗೌಡ ಅವರಿಗೆ ಉದ್ಯೋಗ ನೀಡಲು ಸರ್ವಾನುಮತದಿಂದ ನಿರ್ಣಯಿಸಿದರು.
ಮುಖಂಡರಾದ ಮಲ್ಲಪ್ಪ ಮುರ ಗೋಡ, ದೇಮಗೌಡ ಶೀಲವಂತರ, ಭೀಮಶೇಪ್ಪ ಕರಿದೇಮನ್ನವರ, ನಾರಾಯಣ ನಲವಡೆ, ಈರಣ್ಣ ಉಗರಖೋಡ, ಅಜ್ಜಪ್ಪ ಹೊಸೂರ, ಮುದಕಪ್ಪ ತೋಟಗಿ, ಯಲ್ಲಪ್ಪ ಏಣಗಿ, ಪ್ರಕಾಶ ಅಡಕಿ, ಬಸಪ್ಪ ಅಂಬಗಿ, ಸಿದ್ದಪ್ಪ ಉಜ್ಜಿನಕೊಪ್ಪ, ಮಹಾದೇವ ಅಸುಂಡಿ, ಸಚಿನ ಪಾಟೀಲ ಮೃತನ ಕುಟುಂಬದವರಾದ ಸಹೋದರಿ ನ್ಯಾಯವಾದಿ ಶಾಂತಮ್ಮ ಸಿದ್ರಾಮನ್ನವರ, ಸಹೋದರ ನಾಗನಗೌಡ ವೈಯಕ್ತಿಕವಾಗಿ ಪುರಸಭೆಯಿಂದ ಮೃತ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಡಾ. ವಿಶ್ವನಾಥ ಪಾಟೀಲ ಮೃತ ಕುಟುಂಬಕ್ಕೆ ₹ 25 ಸಾವಿರ, ಜಿಲ್ಲಾ ಪಂಚಾಯ್ತಿ ಸದಸ್ಯ ಶಂಕರ ಮಾಡಲಗಿ ₹ 10 ಸಾವಿರ ವೈಯಕ್ತಿಕ ಪರಿಹಾರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.