ADVERTISEMENT

ರಂಗೋಲಿ ಚಿತ್ತಾರದಲ್ಲಿ ಮತದಾನ ಜಾಗೃತಿ ಘೋಷಣೆ,

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 6:44 IST
Last Updated 3 ಏಪ್ರಿಲ್ 2013, 6:44 IST

ಚನ್ನಮ್ಮನ ಕಿತ್ತೂರು:  ಸ್ಥಳೀಯ ಸೋಮವಾರ ಪೇಟೆಯ ನೇಕಾರ ಓಣಿಯ 189ನೇ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿಯೂ ಮತದಾನ ಜಾಗೃತಿಯ ಘೋಷಣೆಗಳು ಮೊಳಗಿದವು.

`ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು, ನಮ್ಮ ಮತ ದೇಶಕ್ಕೆ ಹಿತ' ಎಂಬ ಘೋಷಣೆಗಳನ್ನು ಮಹಿಳೆಯರು ಕೂಗಿ ನೆರೆದ ಜನರಲ್ಲಿ ಮತದಾನದ ಮಹತ್ವವನ್ನು ಒತ್ತಿ ಹೇಳಿದರು.

ಎನ್‌ಜಿಒ ನಿರ್ದೇಶಕ ಹಾಗೂ ಗುರುವಾರ ಪೇಟೆ ಪ್ರಾಥಮಿಕ ಶಾಲೆಯ ಪ್ರಧಾನ ಗುರು ಎಂ. ಎಫ್. ಜಕಾತಿ ಮಾತನಾಡಿ, ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು. ಅದಕ್ಕೂ ಪೂರ್ವದಲ್ಲಿ ಪಟ್ಟಿಯಲ್ಲಿ ಹೆಸರಿಲ್ಲದವರು ತಮ್ಮ ಹೆಸರುಗಳನ್ನು ನೋಂದಾಯಿಸಬೇಕು. ಮತದಾನ ಪ್ರತಿ ಪ್ರಜೆಯ ಹಕ್ಕು ಮತ್ತು ಕರ್ತವ್ಯವಾಗಿದೆ. ಇದರಿಂದ ಯಾರೂ ವಂಚಿತರಾಗಬಾರದು ಎಂದರು.

ಮಹಿಳೆಯರೂ ಕೂಡ ಮತದಾನದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ಮತ ಚಲಾವಣೆ ಪ್ರತಿ ಭಾರತೀಯನ ಪವಿತ್ರ ಕರ್ತವ್ಯ ಎಂಬುದನ್ನು ಯಾರೂ ಮರೆಯಬಾರದು ಎಂದು ಒತ್ತಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಎಸ್. ಎಂ. ಹಂಜಿ, ಎ. ಎಂ. ಬೂದಿಹಾಳ, ಎ. ಎನ್. ನೀಲಗಾರ, ಪಿ. ಎಂ. ಬಡಿಗೇರ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.ಭಾರತಿ, ವೈಶಾಲಿ ಶಿಕ್ಷಕಿಯರು ಸ್ಪರ್ಧೆಯ ಫಲಿತಾಂಶ ಘೋಷಿಸಿದರು.
ಚನ್ನಮ್ಮ ಹಿರೇಮಠ ನಿರೂಪಿಸಿದರು. ಎಸ್. ಜಿ. ಕೋರಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.