ADVERTISEMENT

ರಾಜ್ಯದಲ್ಲಿ ಮಳೆರಾಯನ ಕೃಪೆ ಇಲ್ಲದೆಯೇ ಘಟಪ್ರಭೆಗೆ ಪ್ರವಾಹ!

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 9:05 IST
Last Updated 6 ಜುಲೈ 2012, 9:05 IST

ಗೋಕಾಕ: ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಗೊಂಡು ತಿಂಗಳಿಗೂ ಹೆಚ್ಚಿನ ಸಮಯ ಗತಿಸಿದರೂ ತಾಲ್ಲೂಕಿನಾದ್ಯಂತ ಮಳೆ ಮಾತ್ರ ಇಲ್ಲ. ಆದರೆ, ಘಟಪ್ರಭಾ ನದಿಯ ಉಪ ನದಿಯಾಗಿರುವ ಹಿರಣ್ಯಕೇಶಿ ನದಿಯ ಹಿನ್ನೀರಿನ ಭಾಗವಾಗಿರುವ ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಘಟಪ್ರಭೆಗೆ ಅಲ್ಪ ಪ್ರಮಾಣದಲ್ಲಿ ನೀರಿನ ಒಳಹರಿವು ಹೆಚ್ಚಾಗಿದ್ದರಿಂದ ಅದು ಕೊಣ್ಣೂರ-ಧುಪದಾಳ ಮಧ್ಯದ ಸೇತುವೆ ಹಾಗೂ ನಗರದಿಂದ ಶಿಂಗಳಾಪುರ ಟಕ್ಕೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಬ್ಯಾರೇಜ್ ನೀರಿನಲ್ಲಿ ಮುಳುಗಿದ್ದರಿಂದ ಗುರುವಾರ ಸಂಚಾರಕ್ಕೆ ಅಡ್ಡಿಯಾಗಿದೆ.

ಮಹಾರಾಷ್ಟ್ರದ ಆಜರಾ, ಗಡಹಿಂಗ್ಲಜ ಮತ್ತಿತರ ಕಡೆಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಪ್ರವಾಹದ ಪ್ರಮಾಣದಲ್ಲಿ ಇನ್ನೂ ಏರಿಕೆಯಾಗುವ ಸಂಭವ ಇದೆ ಎಂದು ಕಂದಾಯ ಅಧಿಕಾರಿಗಳು `ಪ್ರಜಾವಾಣಿ~ಗೆ ಮಾಹಿತಿ ನೀಡಿದ್ದಾರೆ.

ಬೆಳಗಾವಿ: ಬಾರದ ಮಳೆ
ಬೆಳಗಾವಿ: ನಗರದಲ್ಲಿ ಗುರುವಾರ ಬೆಳಿಗ್ಗೆ ಕೆಲ ಕಾಲ ಬಿರುಸಿನಿಂದ ಮಳೆ ಸುರಿದಿದ್ದು ಹೊರತುಪಡಿಸಿದರೆ ದಿನವಿಡೀ ಮಳೆಯು ಬಿಡುವು ನೀಡಿತ್ತು.ಬುಧವಾರ ರಾತ್ರಿ ಆಗಾಗ ಮಳೆ ಸುರಿಯುತ್ತಿತ್ತು. ಮುಂಜಾನೆ ತುಂತುರು ಮಳೆಯಾಗುತ್ತಿದ್ದುದು ಸುಮಾರು 11 ಗಂಟೆಯ ಹೊತ್ತಿಗೆ ಕೆಲ ಕಾಲ ಮಳೆಯು ಬಿರುಸಿನಿಂದ ಸುರಿಯಿತು.
ಬೆಳಿಗ್ಗೆ ಸ್ವಲ್ಪ ಮೋಡ ಕವಿದ ವಾತಾವರಣವಿದ್ದರೂ ಹೊತ್ತೇರು ತ್ತಿದ್ದಂತೆ ಬಾನಲ್ಲಿ ಸೂರ್ಯ ಕಾಣಿಸಿ ಕೊಂಡಿದ್ದನು.
ಬೇಸಿಗೆ ಯಲ್ಲಿರುವಂತೆ ಹಲವು ಬಾರಿ ಬಿಸಿಲು ಕಾಣಿಸಿಕೊಂಡಿತ್ತು. ಬುಧವಾರ ದಿಂದ ಗುರುವಾರ ಬೆಳಿಗ್ಗೆ ವರೆಗೆ ಜಿಲ್ಲೆಯಲ್ಲಿ ಒಟ್ಟು ಸರಾಸರಿ 339.6 ಮಿ.ಮೀ. ಮಳೆಯಾಗಿದೆ.ಖಾನಾಪುರ ತಾಲ್ಲೂಕಿನಲ್ಲಿ 267.5 ಮಿ.ಮೀ, ಬೆಳಗಾವಿಯಲ್ಲಿ 42.1 ಮಿ.ಮೀ ಮಳೆ ಸುರಿದಿದೆ. ಉಳಿತ ತಾಲ್ಲೂಕುಗಳಲ್ಲಿ ಮಳೆಯ ಅಭಾವ ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.