ADVERTISEMENT

ರೈತರ ಹೋರಾಟ ನಿಲ್ಲದು

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 10:20 IST
Last Updated 19 ಜನವರಿ 2011, 10:20 IST

ನಿಗದಿಗಾಗಿ ಮುಂದುವರಿದ ಪ್ರತಿಭಟನೆ


ಚನ್ನಮ್ಮನ ಕಿತ್ತೂರು: ಸಮೀಪದ ಎಂ. ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಸಾಲಿನಲ್ಲಿ ಪೂರೈಕೆ ಮಾಡಿರುವ ಪ್ರತಿ ಮೆ. ಟನ್ ಕಬ್ಬಿಗೆ ಎರಡು ಸಾವಿರ ರೂಪಾಯಿ ದರ ನೀಡಬೇಕೆಂದು ಆಗ್ರಹಿಸಿ  ಕಾರ್ಖಾನೆ ಆವರಣದಲ್ಲಿ ಆರಂಭಗೊಂಡಿರುವ ಧರಣಿ ಮಂಗಳವಾರವೂ ಮುಂದುವರೆಯಿತು.ಮುಂಜಾನೆ 11 ಗಂಟೆಗೆ ಕಾರ್ಖಾನೆ ಆಡಳಿತ ಮಂಡಳಿ ಕಚೇರಿ ದ್ವಾರ ಬಾಗಿಲು ಎದುರು ಕುಳಿತ ಕಬ್ಬು ಬೆಳೆಗಾರರ ಧರಣಿ ಸಂಜೆ 5ಕ್ಕೆ ಅಂತ್ಯಗೊಂಡಿತು. ಧರಣಿ ನಿರತ ರೈತರು ಕಾರ್ಖಾನೆ ಆವರಣದಲ್ಲಿಯೇ ಕುಳಿತು ಮಧ್ಯಾಹ್ನದ ಊಟವನ್ನು ಮಾಡಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಕಾರ್ಖಾನೆ ಮಾಜಿ ನಿರ್ದೇಶಕ ಬಸವರಾಜ ಮೆಳೇದ ಅವರು, ‘ಬೆಂಗಳೂರಿನ ಸಕ್ಕರೆ ನಿರ್ದೇಶನಾಲಯ ಆಯುಕ್ತರು ಈಗಾಗಲೇ ಟನ್ ಕಬ್ಬಿಗೆ ರೂ. 2ಸಾವಿರ ನೀಡಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ. ಮೊದಲ ಕಂತಾಗಿ ರೂ.1800 ನೀಡಬೇಕು ಎಂದೂ ಅವರು ಲಿಖಿತವಾಗಿ ತಿಳಿಸಿದ್ದಾರೆ. ಇದಕ್ಕೆ ಕಾರ್ಖಾನೆ ಮಂಡಳಿ ಒಪ್ಪಿಗೆ ಸೂಚಿಸಿ ಅದರಂತೆ ಬೆಲೆ ನೀಡಬೇಕು. ಇದಕ್ಕೆ ಒಪ್ಪುವವರೆಗೆ ಈ ಧರಣಿ ಮುಂದುವರೆಯಲಿದೆ’ ಎಂದು ಘೋಷಿಸಿದರು.

ಕಾರ್ಖಾನೆ ಮಾಜಿ ಅಧ್ಯಕ್ಷರಾದ ದೊಡಗೌಡ್ರ ಪಾಟೀಲ, ವಿರಕ್ತಯ್ಯಾ ಸಾಲಿಮಠ, ತಾಲ್ಲೂಕು ಕಬ್ಬು ಬೆಳೆಗಾರರ ಸಂಘಟನೆ ಅಧ್ಯಕ್ಷ ಚಂದ್ರಗೌಡ ಪಾಟೀಲ, ಜಿ. ಪಂ. ಸದಸ್ಯ ಬಾಬುಗೌಡ ಪಾಟೀಲ, ರಮೇಶ ಪರವಿನಾಯ್ಕ, ಚಿನ್ನಪ್ಪ ಮುತ್ನಾಳ, ಗಿರೀಶ ಕುಲಕರ್ಣಿ, ರಾಮಣ್ಣ ಕಾಳೇನಾಮ ಮತ್ತಿತರರು ಮಂಗಳವಾರದ ಧರಣಿಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.