ADVERTISEMENT

ಲೂಟಿಯ ಹಣ ಹಂಚಿದ ಕಾಂಗ್ರೆಸ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆರೋಪ;

​ಪ್ರಜಾವಾಣಿ ವಾರ್ತೆ
Published 8 ಮೇ 2018, 8:37 IST
Last Updated 8 ಮೇ 2018, 8:37 IST
ಯಮಕನಮರಡಿ ಕ್ಷೇತ್ರದ ಕಡೋಲಿಯಲ್ಲಿ ಸೋಮವಾರ ರಾತ್ರಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತುಳಸಿ ಸಸಿಗೆ ನೀರುಣಿಸಿ ಉದ್ಘಾಟಿಸಿದರು. ಪಕ್ಷದ ಅಭ್ಯರ್ಥಿ ಮಾರುತಿ ಅಷ್ಟಗಿ, ಸಂಸದ ಸುರೇಶ ಅಂಗಡಿ, ಶಾಸಕ ಉಮೇಶ ಕತ್ತಿ ಇದ್ದರು
ಯಮಕನಮರಡಿ ಕ್ಷೇತ್ರದ ಕಡೋಲಿಯಲ್ಲಿ ಸೋಮವಾರ ರಾತ್ರಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತುಳಸಿ ಸಸಿಗೆ ನೀರುಣಿಸಿ ಉದ್ಘಾಟಿಸಿದರು. ಪಕ್ಷದ ಅಭ್ಯರ್ಥಿ ಮಾರುತಿ ಅಷ್ಟಗಿ, ಸಂಸದ ಸುರೇಶ ಅಂಗಡಿ, ಶಾಸಕ ಉಮೇಶ ಕತ್ತಿ ಇದ್ದರು   

ಬೆಳಗಾವಿ: ‘ಮತದಾರರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ಸಿಗರು ಲೂಟಿ ಮಾಡಿದ ಹಣವನ್ನು ಹಂಚುತ್ತಿದ್ದಾರೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆರೋಪಿಸಿದರು.

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಡೋಲಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಮುಂಬರುವ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಬೇಕೆಂದು ಕಾಂಗ್ರೆಸ್ಸಿಗರು ಹಣ ಹಂಚುತ್ತಿದ್ದಾರೆ. ಅದನ್ನು ಪಡೆದುಕೊಳ್ಳಬೇಡಿ. ಬಿಜೆಪಿ ಸರ್ಕಾರ ರಚನೆಯಾದ ನಂತರ ಈ ಹಣವನ್ನು ವಶಪಡಿಸಿಕೊಂಡು, ರೈತರ ಸಾಲ ಮನ್ನಾ ಮಾಡುತ್ತೇವೆ. ಅಭಿವೃದ್ಧಿ ಕಾರ್ಯಕ್ಕೆ ಬಳಸುತ್ತೇವೆ ಎಂದರು.

ADVERTISEMENT

ರಾಮರಾಜ್ಯದ ಪರಿಕಲ್ಪನೆ: ಮಹರ್ಷಿ ವಾಲ್ಮೀಕಿಯು ನೀಡಿದ ರಾಮರಾಜ್ಯದ ಪರಿಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದಲ್ಲಿ ಬಿ.ಎಸ್‌. ಯಡಿಯೂರಪ್ಪ ಸಾಕಾರಗೊಳಿಸಲು ಸಾಧ್ಯ. ಟಿಪ್ಪು ಸುಲ್ತಾನ್‌ನ ಗುಣ
ಗಾನ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾಧ್ಯವಿಲ್ಲ’ ಎಂದು ಟೀಕಿಸಿದರು.

‘ಮೊಘಲರ ದೊರೆ ಔರಂಗಜೇಬನ ವಿರುದ್ಧ ತೊಡೆತಟ್ಟಿದ್ದ ಶಿವಾಜಿ ಮಹಾರಾಜ ಹಿಂದೂ ರಾಜ್ಯವನ್ನು ಸ್ಥಾಪಿಸಿದ್ದರು. ಶಿವಾಜಿ ಮಹಾರಾಜರ ಪರಂಪರೆಯನ್ನು ಮುಂದುವರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಸಾಧ್ಯ. ದೇಶ
ದಲ್ಲಿ ಬಹುತೇಕ ರಾಜ್ಯಗಳಲ್ಲಿ ಕಮಲ ಅರಳಿದ್ದು, ಕರ್ನಾಟಕದಲ್ಲೂ ಕಮಲ ಅರಳಿಸಬೇಕು. ಈ ಮೂಲಕ ಮೋದಿ ಅವರಿಗೆ ಬೆಂಬಲ ನೀಡಬೇಕು’ ಎಂದು ಕೋರಿದರು.

‘ಪರಿಶಿಷ್ಟರ ಹಕ್ಕುಗಳನ್ನು ಬಿಜೆಪಿ ಮೊಟಕುಗೊಳಿಸುತ್ತಿದೆ ಎಂದು ಕಾಂಗ್ರೆಸ್ಸಿಗರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿ
ದ್ದಾರೆ. ದಲಿತರಿಗೆ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಬಿಜೆಪಿ ನೀಡಿದಷ್ಟು ಗೌರವ ಕಾಂಗ್ರೆಸ್‌ ನೀಡಿಲ್ಲ. ಅಂಬೇಡ್ಕರ್‌ ಹುಟ್ಟಿದ ಮನೆ, ಲಂಡನ್‌ನಲ್ಲಿ ವಾಸವಿದ್ದ ಮನೆ, ಮುಂಬೈನಲ್ಲಿರುವ ಅವರ ಸಮಾಧಿಯನ್ನು ಸ್ಮಾರಕವನ್ನಾಗಿಸಿದೆ’ ಎಂದರು.

ಯಮಕನಮರಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ಅವರು ಕನ್ನಡ ಹಾಗೂ ಮರಾಠಿಯಲ್ಲಿ ಮಾತನಾಡಿದರು. ‘ ಹತ್ತು ವರ್ಷಗಳಿಂದ ಈ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ. ಶಾಸಕರು ಹಾಗೂ ಅವರ ಪಿ.ಎ, ಹಿಂಬಾಲಕರು ಅಭಿವೃದ್ಧಿಯಾಗಿದ್ದಾರೆ’ ಎಂದು ಆರೋಪಿಸಿದರು.

‘ಕಡೋಲಿಯಲ್ಲಿದ್ದ ದೊಡ್ಡ ಮೈದಾನವನ್ನು ಕೆಲವರು ಕಬಳಿಸಿದ್ದಾರೆ. ಈ ಮೈದಾನವನ್ನು ವಾಪಸ್‌ ಪಡೆಯಬೇಕಾದರೆ ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ನೀವು ಕಾಲಲ್ಲಿ ತೋರಿಸಿದ ಕೆಲಸವನ್ನು ತಲೆಯ ಮೇಲೆ ಹೊತ್ತು ಮಾಡುತ್ತೇನೆ’ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಸಂಸದ ಸುರೇಶ ಅಂಗಡಿ, ಉಮೇಶ ಕತ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.