ADVERTISEMENT

ವಿಭಾಗೀಯ ಕಚೇರಿಗಾಗಿ ಧರಣಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 8:20 IST
Last Updated 27 ಸೆಪ್ಟೆಂಬರ್ 2011, 8:20 IST

ಮೂಡಲಗಿ: ಹೆಸ್ಕಾಂ ವಿಭಾಗೀಯ ಕಚೇರಿಯನ್ನು ಮೂಡಲಗಿಯಲ್ಲಿ ಪ್ರಾರಂಭಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಕ್ಷಾತೀತ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ಇಲ್ಲಿಯ ಹೆಸ್ಕಾಂ ಶಾಖಾ ಕಚೇರಿ ಎದುರಿಗೆ ಧರಣಿ ನಡೆಸಿದರು.

ಹೆಸ್ಕಾಂ ವಿಭಾಗೀಯ ಕಚೇರಿ ಸ್ಥಾಪನೆಯ ಜೊತೆಗೆ ವಿದ್ಯುತ್ ಪರಿವರ್ತಕಗಳ ದುರಸ್ತಿ, ಅಕ್ರಮ ಸಕ್ರಮದಲ್ಲಿ ರೈತ ಗ್ರಾಹಕರಿಂದ ಹಣ ತುಂಬಿಸಿಕೊಂಡಿದ್ದು, ಅದರ ಬಗ್ಗೆ ಇನ್ನು ಯಾವ ಕ್ರಮವನ್ನು ತೆಗೆದುಕೊಳ್ಳದೆ ರೈತರಿಗೆ ಅನ್ಯಾಯ ಮಾಡಲಾಗಿದೆ. ಹಳೆಯ ವಿದ್ಯುತ್ ಕಂಬಗಳು ಮತ್ತು ತಂತಿಯನ್ನು ಬದಲಾಯಿಸಿ, ಪರಿವರ್ತಕ ದುರಸ್ತಿ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮುಖಂಡರಾದ ಭೀಮಶಿ ಗಡಾದ, ಭಾಗೋಜಿಕೊಪ್ಪದ ಬಸವರಾಜ ಮಳಲಿ  ಮಾತನಾಡಿ, ಹೆಸ್ಕಾಂ ವಿಭಾಗೀಯ ಕಚೇರಿ ಪ್ರಾರಂಭಿಸಲು ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ರೈತರ ಸಮಸ್ಯೆ ಪರಿಹಾರಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

ಶಿವಬಸಪ್ಪ ಕುರಬಗಟ್ಟಿ, ಬಿ.ವೈ. ಶಿವಾಪುರ, ಎಸ್.ಆರ್. ಸೋನವಾಲ್ಕರ್, ಶ್ರೆಮಂತ ಲಠ್ಠೆ, ಮಾರುತಿ ಕರಿಶೆಟ್ಟಿ, ಬಿ.ಎಲ್. ಹೊಸಮನಿ, ಶಂಕರಯ್ಯ ಹಿರೇಮಠ ಮಾತನಾಡಿದರು.

ಘಟಪ್ರಭಾದ ಹೆಸ್ಕಾಂ ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಕಾಂತ ಸಸಾಲಟ್ಟಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. `ಸ್ಥಳೀಯರ ಬೇಡಿಕೆಯನ್ನು ಪರಿಗಣಿಸಿ ವಿಭಾಗೀಯ ಕಚೇರಿ ಪ್ರಾರಂಭಿಸುವುದು, ಪರಿವರ್ತಕ ದುರಸ್ತಿ ಕೇಂದ್ರ ಸ್ಥಾಪನೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸಿದೆ. ಸರ್ಕಾರದಿಂದ ಆದೇಶ ಬಂದ ನಂತರ ಕಚೇರಿ ತೆರೆಯಲಾಗುವುದು~ ಎಂದು ಹೇಳಿದರು.

ಮೂಡಲಗಿ, ಹಳ್ಳೂರ, ಶಿವಾಪುರ, ಖಾನಟ್ಟಿ, ಗುರ್ಲಾಪುರ, ಕಂಕಣವಾಡಿ, ಪಟಗುಂದಿ, ಧರ್ಮಟ್ಟಿ, ಕಮಲದಿನ್ನಿ, ರಂಗಾಪುರ, ನಾಗನೂರ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.