ಹುಕ್ಕೇರಿ: ತಾಲ್ಲೂಕಿನ ಯಾದಗೂಡ ಗ್ರಾಮದ ಶ್ರೆ ಲಕ್ಷ್ಮೆ ದೇವಿ ಜಾತ್ರಾ ಮಹೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು.ಜಾತ್ರೆಯ ಪ್ರಯುಕ್ತ ದೇವಿ ಆರಾಧನೆ ಮತ್ತು ನೈವೇದ್ಯ ಕೊಡುವ ಕಾರ್ಯಕ್ರಮ ಜರುಗಿತು. ಐದು ದಿನಗಳ ಜಾತ್ರೆಯಲ್ಲಿ ದೇವಿಗೆ ಮದ್ದು ಹಾರಿಸುವ ಮೂಲಕ ಕುಂಬಾರ ಮನೆಯಿಂದ ಇಡೀ ರಾತ್ರಿ ಹೊನ್ನಾಟದ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಮುಲ್ಕಿ ಪಾಟೀಲರ ಮನೆಯ ಸೀರೆ ಉಟ್ಟುಕೊಂಡು ಉಡಿ ತುಂಬಿಸಿದ ನಂತರ ದೇವಿಯನ್ನು ಗದ್ದುಗೆಗೆ ತಂದು ಕೂಡ್ರಿಸಲಾಯಿತು.
ಭಕ್ತರು ದಂಡವತ್ತು ಹಾಕಿ ಮತ್ತು ನೈವೇದ್ಯ ನೀಡುವ ಮೂಲಕ ಕೋಣದ ಮೆರವಣಿಗೆ ಹಾಗೂ ಮಂದಿರದ ಮುಂದೆ `ರಂಗ' ಹೊಯ್ಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲ್ಲೂಕಿನ ಕಡಹಟ್ಟಿ ಕಲಾವಿದರ ಸಂಘದಿಂದ `ಮರಗಾಲ ಕುದುರೆ ಕುಣಿತ' ಮತ್ತು ರಾಯಬಾಗ ತಾಲ್ಲೂಕಿನ ಖಣದಾಳ ಮತ್ತು ಜಮಖಂಡಿ ತಾಲ್ಲೂಕಿನ ಜನವಾಡ ತಂಡದವರಿಂದ `ಶಾಹೀರ ಗಾಯನ' ಜರುಗಿತು.
ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಸವಪ್ರಭು ಮಗೆಣ್ಣಿ ರೂ.25,001, ಜಾತ್ರೆ ಸಮಿತಿ ರೂ.20,001 ಮತ್ತು ರಮೇಶ್ ಜನಮಟ್ಟಿ ರೂ.15,001 ನಗದು ಬಹುಮಾನ ವಿತರಿಸಿದರು.
ಮಧ್ಯಾಹ್ನ 1.30ಕ್ಕೆ ದೇವಿಯ ಆರಾಧನೆ ಹೊನ್ನಾಟದ ಮೂಲಕ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಸೀಮೆಗೆ ಕಳುಹಿಸುವದರೊಂದಿಗೆ ಜಾತ್ರೆಗೆ ತೆರೆ ಎಳೆಯಲಾಯಿತು. ರಾತ್ರಿ 10 ಗಂಟೆಗೆ ಮುಧೋಳ ತಾಲ್ಲೂಕಿನ ಮಹಾಲಿಂಗಪೂರದ ಪರಯ್ಯಸ್ವಾಮಿ ಮಠಪತಿ ರಾಘವೇಂದ್ರ ನಾಟ್ಯ ಸಂಘದ ವತಿಯಿಂದ `ಶ್ರೆ ಕೃಷ್ಣ ಪಾರಿಜಾತ' ಎಂಬ ನಾಟಕ ಜರುಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.